ಪುತ್ತೂರು: ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬಾತನ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದಲಿತ ವ್ಯಕ್ತಿಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿ ಬರುತ್ತಿವೆ. ಹಾಗೂ ಈ ಬಗ್ಗೆ ಈಗಾಗಲೇ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಸಹ ಬಂಧಿಸದೇ ಆರೋಪಿಗೆ ಸಹಕರಿಸುತ್ತಿರುವುದು ಖಂಡನೀಯ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹತ್ತನೇ ತರಗತಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ತನ್ನ ಪ್ರಭಾವ ಬಳಸಿ ದೌರ್ಜನ್ಯವನ್ನು ಯಾರಿಗೂ ಹೇಳಬಾರದೆಂದು ಆರೋಪಿ ಮಹೇಶ್ ಭಟ್ ದಲಿತ ಕುಟುಂಬದ ಮೇಲೆ ಬೆದರಿಕೆ ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಗೈರು ಹಾಜರಾಗಿರುವ ಬಗ್ಗೆ ವಿಚಾರಿಸಲು ಶಿಕ್ಷಕರು ಬಾಲಕಿಯ ಮನೆಗೆ ತೆರಳಿದಾಗ ಬಾಲಕಿಯನ್ನು ಶಿಕ್ಷಕರ ಜೊತೆ ಮಾತನಾಡಿಸಲು ಆ ಕುಟುಂಬ ಹಿಂಜರಿದಿದೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಈ ಪ್ರಕರಣದಲ್ಲಿ ಆರೋಪಿಯಿಂದ ಲೈಂಗಿಕ ದೌರ್ಜನ್ಯ, ದಲಿತ ದೌರ್ಜನ್ಯ, ಬೆದರಿಕೆ, ಸಾಕ್ಷ್ಯ ನಾಶದ ಪ್ರಯತ್ನ ಇತ್ಯಾದಿಗಳಾದರೂ ಸ್ಥಳೀಯ ಪೋಲಿಸ್ ಇಲಾಖೆ ಆರೋಪಿಯನ್ನು ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸುವ ಬದಲು ಆರೋಪಿಗೆ ಜೈಲು ಶಿಕ್ಷೆಯಿಂದ ರಕ್ಷಿಸಲು ಪ್ರಯತ್ನ ಪಡುತ್ತಿರುವಂತೆ ತೋರುತ್ತಿದೆ.

ಫೋಕ್ಸೋ ಹಾಗೂ ಅಟ್ರಾಸಿಟಿ ಕೇಸ್ ದಾಖಲು ಮಾಡಿದ್ದರೂ ಕಾಮುಕ ಬಿಜೆಪಿ ಮುಖಂಡನನ್ನು ವಿಟ್ಲ ಪೋಲಿಸರು ಬಂಧಿಸದೇ ಇರಲು ಕಾರಣವೇನು?
ಪೋಲಿಸರಿಗೆ ಆರೋಪಿಯ ಪರವಾಗಿ ಒತ್ತಡ ಹಾಕುತ್ತಿರುವವರು ಯಾರು?

ಈ ಪ್ರಕರಣದ ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರು ಸ್ವತಃ ಮುತುವರ್ಜಿವಹಿಸಿ ಆರೋಪಿ ಹಾಗೂ ಆರೋಪಿಯ ಪರವಾಗಿ ಸಾಕ್ಷ್ಯ ನಾಶ ಮಾಡಲು ಪ್ರಯತ್ನ ಪಟ್ಟವರ ವಿರುದ್ಧವೂ ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!