ಬಿಜೆಪಿಯಿಂದ ಉಚ್ಚಾಟನೆಗೊಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ಬ್ಯಾಟ್ ಬೀಸಿದ್ದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧ ನೇರವಾಗಿಯೇ ಶಾಸಕ ವಿಜಯಾನಂದ್ ಕಾಶಪ್ಪನವರ್ ಗುಡುಗಿದ್ದರು.

ಇದೀಗ ಮಹತ್ವದ ಬೆಳವಣಿಗೆ ಎಂಬಂತೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷರಾಗಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಅವರೇ ಇಂದು ಆಯ್ಕೆಯಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ಅಧ್ಯಕ್ಷರ ಆಯ್ಕೆ ಕುರಿತಾಗಿ ನಡೆದ ಸಭೆಯಲ್ಲಿ ಟ್ರಸ್ಟ್ ಪದಾಧಿಕಾರಿಗಳಿಂದ ಕಾಶಪ್ಪನವರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಈ ಬೆಳವಣಿಗೆಯು ಇತ್ತೀಚೆಗೆ ಪಂಚಾಮಸಾಲಿ ಸಮುದಾಯದ ಸ್ವಾಮೀಜಿ ಬದಲಾವಣೆ ವಿಚಾರ, ಪಂಚಮಸಾಲಿ ಸಮುದಾಯದ ನಾಯಕರ ರಾಜಕೀಯ ವಾಕ್ಸಮರದ ಬೆಳವಣಿಗೆಗಳ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಯವರನ್ನು ಟ್ರಸ್ಟ್ ನೇಮಿಸಿದೆ. ಅದರ ನಿಬಂಧನೆಗಳಿಗೆ ಒಳಪಟ್ಟು ಸ್ವಾಮೀಜಿ ಸಮಾಜವನ್ನು ಸಂಘಟಿಸಬೇಕು. ಅದು ಬಿಟ್ಟು ಓರ್ವ ವ್ಯಕ್ತಿ (ಯತ್ನಾಳ್) ಹಾಗೂ ಪಕ್ಷವನ್ನು ಬೆಂಬಲಿಸಿ ನಿಲ್ಲುವುದು ಸರಿಯಲ್ಲ. ಇದು ಹೀಗೆ ಮುಂದುವರಿದರೆ ಸಮಾಜ ಕಟ್ಟುನಿಟ್ಟಿನ ಕಠಿಣ ಕ್ರಮ ಜರುಗಿಸಲಿದೆ. ಸ್ವಾಮೀಜಿ ಅವರನ್ನೇ ಬದಲಾಯಿಸುತ್ತೇವೆ ಎಂಬ ಮಾತನ್ನು ಕಾಶಪ್ಪನರ್ ಆಡಿದ್ದು ಗೊತ್ತೇ ಇದೆ.

ಯತ್ನಾಳ್ ಪರ ಸ್ವಾಮೀಜಿ ಮಾತನಾಡುತ್ತಿರುವುದು ಟ್ರಸ್ಟ್ ನಿಬಂಧನೆಗಳ ವಿರುದ್ಧವಾಗಿದೆ. ಸ್ವಾಮೀಜಿಯವರು ಟ್ರಸ್ಟ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರ ಬಗ್ಗೆ ಕೀಳುಮಟ್ಟದಲ್ಲಿ ಯತ್ನಾಳ್ ಮಾತನಾಡಿದ್ದಾರೆ.

ಅಂತವರ ಪರ ನಿಂತ ಸ್ವಾಮೀಜಿಗಳ ಪೀಠಕ್ಕೆ ಕುತ್ತು ಎಂಬ ಎಚ್ಚರಿಕೆಯನ್ನು ಕೆಲ ದಿನಗಳ ಹಿಂದೆಯಷ್ಟೇ ಕಾಶಪ್ಪನವರ್ ನೀಡಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!