
ದಾವಣಗೆರೆ ನಗರದ ಹದಡಿ ರಸ್ತೆಯ ಮಳಿಗೆಯೊಂದರಲ್ಲಿ ರೌಡಿಶೀಟರ್ ಸಂತೋಷಕುಮಾರ್ ಅಲಿಯಾಸ್ ಕಣುಮ ಸಂತೋಷ್ (50) ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಸೋಮವಾರ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಕೆಟಿಜೆ ನಗರದ ಕಣುಮ ಸಂತೋಷ್ ವಿರುದ್ಧ ಕೊಲೆ, ವಂಚನೆ ಸೇರಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ರೌಡಿ ಬುಳ್ಳ ನಾಗನ ಕೊಲೆ ಪ್ರಕರಣದಲ್ಲಿ ಕಣುಮ ಪ್ರಮುಖ ಆರೋಪಿಯಾಗಿದ್ದ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಗಳ ತಂಡವೊಂದು ಈ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದ ಮಳಿಗೆಯೊಂದಕ್ಕೆ ಕಣುಮ ಸೋಮವಾರ ಬಂದಿದ್ದ. ಸಂಜೆ 5.30ಕ್ಕೆ ಆಟೊದಲ್ಲಿ ಬಂದ ಏಳೆಂಟು ಜನರ ಗುಂಪು ಕಣುಮನ ಮುಖಕ್ಕೆ ಕಾಳುಮೆಣಸಿನ ಪುಡಿ ಎರಚಿದೆ. ಬಳಿಕ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಸ್ಥಳದಿಂದ ತೆರಳುವಾಗ ‘ಉಘೇ, ಉಘೇ..’ ಎಂದು ಕೂಗುತ್ತ ಪರಾರಿಯಾಗಿದೆ.
ಕಣುಮ ಸಂತೋಷನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ದಾಳಿ ನಡೆಸಿದ ತಂಡದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಪ್ರಕರಣದ ತನಿಖೆಗೆ ಡಿವೈಎಸ್ಪಿ ಶರಣ ಬಸವೇಶ್ವರ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಪತ್ತೆಗೆ ತಂಡಗಳು ಕಾರ್ಯಪ್ರವೃತ್ತವಾಗಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.






