
ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಂಡಿರುವ ಭಾರತ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸಿದ ಭಾರತ ಉಗ್ರರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಯಾವುದೇ ಸೂಚನೆ ಇಲ್ಲದೆ ಸುಮಾರು 20 ನಿಮಿಷಗಳ ಕಾಲ ನಡೆದ ಈ ದಾಳಿಯಿಂದ ಪಾಕ್ ಪತರುಗುಟ್ಟಿ ಹೋಗಿದೆ. ಕಾರ್ಯಾಚರಣೆ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ (National Security Advisor) ಅಜಿತ್ ದೋವಲ್ (Ajit Doval) ಅಮೆರಿಕ್ಕೆ ಮಾಹಿತಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಸಂಘರ್ಷ ಶೀಘ್ರದಲ್ಲಿಯೇ ಕೊನೆಯಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
“ಇದು ನಾಚಿಕೆಗೇಡಿನ ಸಂಗತಿ. ನಾವು ಓವಲ್ ಕಚೇರಿಗೆ ತೆರಳುವ ವೇಳೆ ಅದರ ಬಗ್ಗೆ ಕೇಳಿದ್ದೇವೆ” ಎಂದಿದ್ದಾರೆ. “ಹಿಂದಿನ ಸಂಗತಿಯನ್ನು ಆಧರಿಸಿ ಏನಾದರೂ ಸಂಭವಿಸಲಿದೆ ಎಂದು ಜನರಿಗೆ ತಿಳಿದಿತ್ತು ಎಂದು ನಾನು ಭಾವಿಸುತ್ತೇನೆ. ಭಾರತ-ಪಾಕಿಸ್ತಾನ ಬಹಳ ಸಮಯದಿಂದ ಹೋರಾಡುತ್ತಿದೆ. ಹೋರಾಟಕ್ಕೆ ದಶಕಗಳ ಇತಿಹಾಸವೇ ಇದೆ. ಸಂಘರ್ಷ ಬಹಳ ಬೇಗ ಕೊನೆಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆʼʼ ಎಂದಿದ್ದಾರೆ.
ಅಮೆರಿಕಕ್ಕೆ ದಾಳಿ ಬಗ್ಗೆ ಮಾಹಿತಿ ನೀಡಿದ ಅಜಿತ್ ದೋವಲ್
ಈ ಮಧ್ಯೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ದಾಳಿಯ ಬಗ್ಗೆ ಅಮೆರಿಕ್ಕೆ ಮಾಹಿತಿ ನೀಡಿದ್ದಾರೆ. ಭಾರತವು ಬುಧವಾರ (ಮೇ 7) ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಕೆಲವೇ ಕ್ಷಣಗಳ ನಂತರ ಅಜಿತ್ ದೋವಲ್ ಅವರು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೊ ಅವರೊಂದಿಗೆ ಮಾತನಾಡಿದ್ದಾರೆ. ಈ ದಾಳಿಗಳು ಯಾವ ರೀತಿಯಲ್ಲಿ ನಡೆದವು ಮತ್ತು ಯಾಕೆ ನಡೆಸಲಾಯಿತು ಎಂಬುದನ್ನು ಅವರು ವಿವರಿಸಿದ್ದಾರೆ ಎಂದು ವಾಷಿಂಗ್ಟನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
“ಭಾರತದ ದಾಳಿ ಕೇಂದ್ರೀಕೃತ ಮತ್ತು ನಿಖರವಾಗಿದ್ದವು. ಯಾವುದೇ ಪಾಕಿಸ್ತಾನಿ ನಾಗರಿಕ, ಆರ್ಥಿಕ ಅಥವಾ ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆದಿಲ್ಲ. ಭಯೋತ್ಪಾದಕ ಶಿಬಿರಗಳನ್ನು ಮಾತ್ರ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆʼʼ ಎಂದು ವಾಷಿಂಗ್ಟನ್ ಡಿಸಿಯ ಭಾರತೀಯ ರಾಯಭಾರ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ಈ ಕಾರ್ಯಾಚರಣೆಯಿಂದ ನಾಗರಿಕರಿಗೆ ಯಾವುದೇ ಹಾನಿ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿತ್ತು ಎಂದೂ ತಿಳಿಸಿದೆ






