
ಮಂಗಳೂರು: ‘ಸತತ ಲಾಭದಲ್ಲಿ ವ್ಯವಹಾರ ಮಾಡುತ್ತಿರುವ ಕರ್ಣಾಟಕ ಬ್ಯಾಂಕ್ ಸು ಭದ್ರವಾಗಿದೆ. ಬ್ಯಾಂಕಿನ ಆರ್ಥಿಕ ಸ್ಥಿತಿ ಸದೃಢವಾಗಿದ್ದು, ವದಂತಿಗೆ ಬ್ಯಾಂಕ್ ಗ್ರಾಹಕರು ಕಿವಿಗೊಡಬಾರದು’ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.
‘ಠೇವಣಿದಾರರ ಹಣದ ಸುರಕ್ಷತೆ ಮತ್ತು ಭದ್ರತೆಯೇ ನಮ್ಮ ಬ್ಯಾಂಕ್ನ ಆದ್ಯತೆಯಾಗಿದ್ದು, 101 ವರ್ಷಗಳಿಂದ ಇದನ್ನು ಪಾಲಿಸಿಕೊಂಡು ಬರುತ್ತಿದ್ದೇವೆ.
ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಬ್ಯಾಂಕ್ ಬಗ್ಗೆ ಪ್ರಕಟವಾಗಿರುವ ಸುದ್ದಿ ದುರುದ್ದೇಶದಿಂದ ಕೂಡಿದ್ದು, ಗ್ರಾಹಕರ ಮನಸ್ಸಿನಲ್ಲಿ ಆತಂಕ ಸೃಷ್ಟಿಸುವ ಯತ್ನ ಮಾಡಲಾಗಿದೆ. ಗ್ರಾಹಕರು ಇದಕ್ಕೆ ಕಿವಿಗೊಡಬಾರದು’ ಎಂದು ಮುಖ್ಯ ವ್ಯವಸ್ಥಾಪಕಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಪಲ್ಲವಿ ಟಿ.ಎಸ್ ತಿಳಿಸಿದ್ದಾರೆ.
‘ಕರ್ಣಾಟಕ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದ್ದು, ಯಾವುದೇ ಹಣಕಾಸಿನ ಹಗರಣಗಳು ನಡೆದಿಲ್ಲ. ಗ್ರಾಹಕರು ಮತ್ತು ಠೇವಣಿದಾರರು ಆತಂಕಪಡುವ ಅಗತ್ಯವಿಲ್ಲ’ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಹೇಳಿದ್ದಾರೆ.
‘ಕರ್ಣಾಟಕ ಬ್ಯಾಂಕ್ ಸಿಇಒ ಮತ್ತು ಎಂಡಿ ರಾಜೀನಾಮೆ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಜನರಲ್ಲಿ ಗೊಂದಲ ಮೂಡಿಸಿವೆ. ಆದರೆ, 101 ವರ್ಷಗಳ ಇತಿಹಾಸ ಇರುವ ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿದ್ದು, ಬ್ಯಾಂಕ್ ವಹಿವಾಟು ₹1.82 ಲಕ್ಷ ಕೋಟಿಗೂ ಮಿಕ್ಕಿ ಇದೆ. ದೇಶದಲ್ಲಿ 950 ಶಾಖೆಗಳು ಇದ್ದು, 9,000 ಸಿಬ್ಬಂದಿ ಹೊಂದಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ






