

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಭಾಗವಾಗಿ ಕೆರೆ ಪ್ರದೇಶವನ್ನು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಜರ್ಮನ್ ತಂತ್ರಜ್ಞಾನದಲ್ಲಿ ಕಾರಂಜಿ ಹಾಗೂ ವಿದ್ಯುತ್ ಅಲಂಕಾರಗಳ ವ್ಯವಸ್ಥೆಗಾಗಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಸುಮಾರು ೮ ಕೋಟಿ ರೂ. ವೆಚ್ಚ ಬರುವ ಸಾಧ್ಯತೆ ಇರುವುದಾಗಿ ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದರು.
ದೇವಾಲಯದ ಕೆರೆ ಅಭಿವೃದ್ಧಿ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಾ, “ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮನಸ್ಸಿಗೆ ಹಿತ ನೀಡುವಂತಹ ನೈಸರ್ಗಿಕ ಹಾಗೂ ಆಧುನಿಕ ಸೌಲಭ್ಯಗಳು ಇರಬೇಕೆಂಬ ಉದ್ದೇಶದಿಂದ ಕಾರಂಜಿಯ ಲೇಸರ್ ಶೋ ಮತ್ತು ಪ್ರಾಜೆಕ್ಟರ್ ಶೋಗಳೂ ಯೋಜನೆಯ ಭಾಗವಾಗಿವೆ. ಕೆರೆಯ ಶುದ್ಧತೆಯನ್ನು ಕಾಪಾಡಿಕೊಳ್ಳುವ ರೀತಿಯಲ್ಲಿ ತಂತ್ರಜ್ಞಾನ ಅನುಸರಿಸಲಾಗುತ್ತದೆ. ಶೀಘ್ರದಲ್ಲೇ ಮಾಸ್ಟರ್ ಪ್ಲ್ಯಾನ್ ಅಂತಿಮಗೊಳ್ಳಲಿದೆ,” ಎಂದರು.
ದೆಹಲಿಯ ಅಕ್ವಾರೀಸ್ ಟೆಕ್ನಾಲಜಿಯ ಆರ್.ಕೆ. ಚೌಹಾನ್ ಅವರು ವಿವಿಧ ರೀತಿಯ ಕಾರಂಜಿಗಳ ತಾಂತ್ರಿಕ ವಿವರಗಳನ್ನು ಸಭೆಯಲ್ಲಿ ಮಂಡಿಸಿದರು.
ಸಭೆಯಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಕುಮಾರ್ ಬಿ., ಸುಭಾಷ್ ರೈ, ಮಹಾಬಲ ರೈ ವಳತ್ತಡ್ಕ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.







