
ಪುತ್ತೂರು: ಕೊಳ್ತಿಗೆ ಗ್ರಾಮದ ಕಣಿಯಾರ್ ಎಂಬಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ ಆನೆ ದಾಳಿಯಿಂದ ಮೃತಪಟ್ಟ ಕಾರ್ಮಿಕೆ ಸೆಲ್ಲಮ್ಮ ಅವರ ಕುಟುಂಬಕ್ಕೆ ಅರಣ್ಯ ಇಲಾಖೆ 20 ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು ಮಾಡಿದೆ.
ಗತ ಏಪ್ರಿಲ್ 29 ರಂದು ಬೆಳಿಗ್ಗೆ ರಬ್ಬರ್ ಟ್ಯಾಪಿಂಗ್ ಕೆಲಸದಲ್ಲಿ ನಿರತರಾಗಿದ್ದ ಸೆಲ್ಲಮ್ಮ ಮೇಲೆ ಕಾಡಿನಿಂದ ದಿಡೀರನೆ ಬಂದ ಕಾಡಾನೆ ದಾಳಿ ನಡೆಸಿ ಸ್ಥಳದಲ್ಲೇ ಕೊಂದು ಹಾಕಿತ್ತು. ಈ ದುರ್ಘಟನೆಯ ಬಳಿಕ ಶಾಸಕ ಅಶೋಕ್ ರೈ ಅವರು ವಿಷಯವನ್ನು ಗಮನಕ್ಕೆ ತೆಗೆದುಕೊಂಡು ಸಂಬಂಧಿತ ಇಲಾಖೆಗೆ ಶಿಫಾರಸ್ಸು ಸಲ್ಲಿಸಿದ್ದರು.
ಅವರ ಶಿಫಾರಸ್ಸಿನ ಆಧಾರದ ಮೇಲೆ ಇದೀಗ ಅರಣ್ಯ ಇಲಾಖೆ 20 ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಿ, ಅದಕ್ಕಾಗಿ ಮಂಜೂರಾತಿ ಪತ್ರವನ್ನು ಸೆಲ್ಲಮ್ಮ ಅವರ ಪುತ್ರ ಯೋಗೀಶ್ವರ ಅವರಿಗೆ ಶಾಸಕ ಅಶೋಕ್ ರೈ ಹಸ್ತಾಂತರಿಸಿದರು.
ಈ ಸಂದರ್ಭ ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ ಉಪಸ್ಥಿತರಿದ್ದರು.







