
ಉಪ್ಪಿನಂಗಡಿ: 2021 ರಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ವಾಹನ ಕಳವು ಪ್ರಕರಣ (ಅಪರಾಧ ಸಂಖ್ಯೆ: 58/2021 U/S 379 ಐಪಿಸಿ) ದಲ್ಲಿ ಆರೋಪಿ ಯತಿರಾಜ್ (34), ಮಂಜೇಶ್ವರ, ಕಾಸರಗೋಡು ಮೂಲದವನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
2022 ರಿಂದ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ವಿರುದ್ಧ ಸುಮಾರು ಏಳು ಬಾರಿ ನ್ಯಾಯಾಲಯವು ಜಾಮೀನುಗೊಂಡ ವಾರೆಂಟ್ ಜಾರಿಗೊಳಿಸಿದ್ದರೂ, ಆತನು ನ್ಯಾಯಾಲಯದ ಮುಂದೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸರು 2025 ಜುಲೈ 22 ರಂದು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸಿದ್ದ ಆರೋಪಿ ವಿರುದ್ಧ ಇದೀಗ ಹೊಸದಾಗಿ ಉಪ್ಪಿನಂಗಡಿ ಠಾಣೆಯಲ್ಲಿ ಅಪರಾಧ ಸಂಖ್ಯೆ: 65/2025, BNS 2023 ರ ಕಲಂ 269 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಆರೋಪಿತ ಯತಿರಾಜ್ ವಿರುದ್ಧ ಪುತ್ತೂರು ನಗರ, ಬಂಟ್ವಾಳ ನಗರ, ವೇಣೂರು ಪೊಲೀಸ್ ಠಾಣೆಗಳಲ್ಲಿ ಕೂಡ ವಿವಿಧ ವಾಹನ ಕಳವು ಪ್ರಕರಣಗಳು ದಾಖಲಾಗಿದ್ದು, ಅಲ್ಲದೆ ಕೊಣಾಜೆ, ಕಾವೂರು, ವಿಟ್ಲ ಸೇರಿದಂತೆ ಒಟ್ಟು 7 ಪ್ರಕರಣಗಳಲ್ಲಿ ಆತನ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






