ಧರ್ಮಸ್ಥಳದ (Dharmasthala) ವಿರುದ್ಧದ ಷಡ್ಯಂತ್ರದ ಪ್ರಮುಖ ರೂವಾರಿ ಎಂಬ ಶಾಸಕ ಜನಾರ್ದನ ರೆಡ್ಡಿ ಆರೋಪಕ್ಕೆ ಕಾಂಗ್ರೆಸ್ ಸಂಸದ, ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಪ್ರತಿಕ್ರಿಯಿಸಿದ್ದಾರೆ. ಶಾಸಕ ಜನಾರ್ದನ ರೆಡ್ಡಿ ಆರೋಪ ಕೇವಲ ಉಹಾಪೋಹ ಎಂದು ಅವರು ಹೇಳಿದ್ದಾರೆ.

ಜನಾರ್ದನ ರೆಡ್ಡಿ ಕಟ್ಟು ಕತೆಗಳನ್ನು ಹೇಳುತ್ತಿದ್ದಾರೆ ಎಂದ ಸಸಿಕಾಂತ್ ಸೆಂಥಿಲ್, ನಾನು ಯಾವುದೇ ರಾಜ್ಯಸರ್ಕಾರಕ್ಕೆ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ರೆಡ್ಡಿ ಆರೋಪ ಕೇಳಿ ನಗು ಬರುತ್ತಿದೆ. ನನಗೆ ಇದರ ಹಿಂದೆ ಏನಿದೆ ಎಂಬುದು ಗೊತ್ತಿಲ್ಲ. ನಾನು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ 6 ವರ್ಷ ಆಗಿದೆ. ಈಗ ನಾನು ಬೇರೆ ಪಕ್ಷದಲ್ಲಿ ಇದ್ದೇನೆ. ನಾನು ಬಳ್ಳಾರಿಯಲ್ಲಿ ಕರ್ತವ್ಯದಲ್ಲಿ ಇದ್ದಾಗ ಅವರ (ರೆಡ್ಡಿ) ಬಂಧನ ಆಗಿತ್ತು. ನಾನು ಅವಾಗ ಮಾತ್ರ ರೆಡ್ಡಿಯವರನ್ನು ನೋಡಿದ್ದು ಎಂದು ಸೆಂಥಿಲ್ ಹೇಳಿದ್ದಾರೆ.

ಸಸಿಕಾಂತ್ ಸೆಂಥಿಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಜನಾರ್ದನ ರೆಡ್ಡಿ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಿಕ ದೂರು ನೀಡಿದ್ದ ಪ್ರಕರಣ ಸಂಬಂಧ ಮಂಗಳವಾರ ಮಾತನಾಡಿದ್ದ ಜನಾರ್ದನ ರೆಡ್ಡಿ, ಇದರ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ತಮಿಳುನಾಡಿನ ಹಾಲಿ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಕೈವಾಡ ಇದೆ ಎಂದಿದ್ದರು. ಕರ್ನಾಟಕ ಕಾಂಗ್ರೆಸ್ ಸರ್ಕಾರವು ಸಂಸದ ಸಸಿಕಾಂತ್ ಸೆಂಥಿಲ್ ಒತ್ತಡದ ಮೇರೆಗೆ ಎಸ್ಐಟಿ ರಚನೆ ಮಾಡಿದೆ. ಸೆಂಥಿಲ್ ಅವರು ಕಾಂಗ್ರೆಸ್ ವರಿಷ್ಠರಿಗೆ ಆಪ್ತರಾಗಿದ್ದಾರೆ. ಅವರೇ ಎಸ್ಐಟಿ ರಚನೆಗೆ ಒತ್ತಡ ಹಾಕಿದ್ದಾರೆ. ಅನಾಮಿಕ ಮಾಸ್ಕ್ ಮ್ಯಾನ್ ತಮಿಳುನಾಡಿನವ. ಅಲ್ಲದೆ, ಸಸಿಕಾಂತ್ ಸೆಂಥಿಲ್ ಜತೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ರೆಡ್ಡಿ ಆರೋಪಿಸಿದ್ದರು.

ಅಷ್ಟೇ ಅಲ್ಲದೆ, ಧರ್ಮಸ್ಥಳ ವಿಚಾರದಲ್ಲಿ ಸಸಿಕಾಂತ ಸೆಂಥಿಲ್ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲು ಕೂಡ ಸಿದ್ಧರಿರುವುದಾಗಿ ಜನಾರ್ದನ ರೆಡ್ಡಿ ಹೇಳಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!