
ಮಂಗಳೂರು: ದೇರಳಕಟ್ಟೆಯ ಮುತ್ತೂಟ್ ಪೈನಾನ್ಸ್ ಕಚೇರಿಯಲ್ಲಿ ನಡೆದಿದ್ದ ಕಳ್ಳತನ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಬ್ದುಲ್ ಲತೀಫ್ (47) ಅನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಹಿನ್ನೆಲೆ
2025ರ ಮಾರ್ಚ್ 29ರಂದು ರಾತ್ರಿ ದೇರಳಕಟ್ಟೆಯ ಹೆಚ್.ಎಮ್. ಕಾಂಪ್ಲೆಕ್ಸ್ನಲ್ಲಿರುವ ಮುತ್ತೂಟ್ ಪೈನಾನ್ಸ್ ಕಚೇರಿಯ ಬಾಗಿಲಿನ ಸೈರನ್ ಹೂಟರ್ ಕೇಬಲ್ ಕತ್ತರಿಸಿ ಕಳವು ಮಾಡಲು ಯತ್ನಿಸಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಮೊ.ನಂ: 42/2025 ಕಲಂ 331[40], 305, 62, 13 BNS) ದಾಖಲಾಗಿತ್ತು.
ಈ ಪ್ರಕರಣದಲ್ಲಿ ಕೇರಳದ ಇಡುಕ್ಕಿ ಮೂಲದ ಮುರಳಿ ಮತ್ತು ಕಾಂಞಿಗಾಡ್ನ ಆರ್ಷದ್ ಎಂಬವರು ಮೊದಲು ಬಂಧಿತರಾಗಿದ್ದರು. ಆದರೆ ಪ್ರಕರಣದ ಪ್ರಮುಖ ಆರೋಪಿ, ಕಾಸರಗೋಡು ಜಿಲ್ಲೆಯ ವೆಲ್ಲರಿಕುಂಡು ತಾಲೂಕಿನ ಅರಿಕಾರ ಅಂಚೆಯ ಬಳಲಿ ಗ್ರಾಮದ ನಿವಾಸಿ ಅಬ್ದುಲ್ ಲತೀಫ್ @ ಲತೀಫ್, ತಲೆಮರೆಸಿಕೊಂಡಿದ್ದನು.
ಭಾರೀ ಕಳ್ಳತನ ಪ್ರಕರಣಗಳಲ್ಲಿ ಪ್ರಮುಖ ಆರೋಪಿ
ಅಬ್ದುಲ್ ಲತೀಫ್ ಹಿಂದೆ ನಡೆದ ಹಲವು ಪ್ರಮುಖ ಕಳ್ಳತನ ಪ್ರಕರಣಗಳಲ್ಲಿ ಸಂಚುಕೋರನಾಗಿದ್ದು,
ಕೇರಳದ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಧಾನಿ ಜುವೆಲ್ಲರಿ ಶಾಪ್ ಕಳ್ಳತನ ಪ್ರಕರಣದಲ್ಲಿ ಸುಮಾರು 20 ಕೆಜಿ ಬಂಗಾರ ಕದ್ದ ಆರೋಪ,
ಕೇರಳದ ಚಂದೇರ್ ಪೊಲೀಸ್ ಠಾಣಾ ವ್ಯಾಪ್ತಿಯ ಚೆರವತ್ತೂರು ವಿಜಯ ಬ್ಯಾಂಕ್ ಕಳ್ಳತನ ಪ್ರಕರಣದಲ್ಲಿ ಸುಮಾರು 15.80 ಕೆಜಿ ಬಂಗಾರ ಹಾಗೂ ₹2.5 ಲಕ್ಷ ನಗದು ಕಳವು ಮಾಡಿದ ಪ್ರಕರಣಗಳಲ್ಲಿ ಕೂಡಾ ಅವನ ಹೆಸರು ಪ್ರಮುಖ ಆರೋಪಿಯಾಗಿ ದಾಖಲಾಗಿತ್ತು.
ಮುಂದಿನ ಕ್ರಮ
ಬಂಧಿತನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಹಾಗೂ ಕಾನೂನು ಕ್ರಮಕ್ಕಾಗಿ ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶ್ಲಾಘನೀಯ ಪಾತ್ರ ವಹಿಸಿದ್ದಾರೆ.






