
ಮಂಗಳೂರು ನಗರ, ಆಗಸ್ಟ್ 31 :ಉಳ್ಳಾಲ ತಾಲೂಕು ಪಜೀರು ಗ್ರಾಮದ ಕಂಬಳಪದವು ಪ್ರದೇಶದಲ್ಲಿನ ಬಾಡಿಗೆ ಮನೆಯಲ್ಲಿ ಆಕ್ರಮ ಮದ್ಯ ತಯಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಪ್ರಣವ್ ಪಿ. ಶೆಣೈ (24) ಹಾಗೂ ಅನೂಷ್ ಆರ್. (24) ಎಂದು ಗುರುತಿಸಲಾಗಿದೆ. ದಾಳಿಯ ಸಂದರ್ಭದಲ್ಲಿ ಪೊಲೀಸರು ಸುಮಾರು ರೂ. 1,15,110/- ಮೌಲ್ಯದ ಆಕ್ರಮ ಮದ್ಯ, ತಯಾರಿಕಾ ಯಂತ್ರೋಪಕರಣಗಳು, ಮದ್ಯ ಬಾಟ್ಲಿಗಳು ಹಾಗೂ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕೆ ಪರವಾನಗಿ ಇರುವ Mansion House ಬಾಟ್ಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 104/2025, ಕಲಂ 123 r/w 3(5) BNS 2023 ಹಾಗೂ ಕಲಂ 13, 32, 34 KE Act ಅಡಿ ಪ್ರಕರಣ ದಾಖಲಾಗಿದೆ.
ಈ ದಾಳಿಯು ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ (L&O) ಮಿಥುನ್ ಐಪಿಎಸ್ ಹಾಗೂ ಉಪ ಪೊಲೀಸ್ ಆಯುಕ್ತ (ಅಪರಾಧ) ರವಿಶಂಕರ್ ಕೆ.ಎಸ್.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕೊಣಾಜೆ ಠಾಣಾ ಸಿಬ್ಬಂದಿಗಳಿಂದ ಯಶಸ್ವಿಯಾಗಿ ನೆರವೇರಿಸಲಾಗಿದೆ.






