
ಕಾಣಿಯೂರು: ಕಾಣಿಯೂರು ಸಮೀಪದ ಪುನ್ನತ್ತಾರು ಎಂಬಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬೆಳ್ಳಾರೆ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆ ವಿದ್ಯಾರ್ಥಿನಿ ಮನೆಗೆ ಹೋಗುತ್ತಿದ್ದ ವೇಳೆ, ಬೈಕಿನಲ್ಲಿ ಬಂದ ಯುವಕ ಕಿರುಕುಳ ನೀಡಿದ್ದಾನೆಂದು ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದರು.
ವಿದ್ಯಾರ್ಥಿನಿ ನೀಡಿದ ಮಾಹಿತಿಯ ಆಧಾರದಲ್ಲಿ ಘಟನೆಯ ಸ್ಥಳದ ಸುತ್ತಮುತ್ತ ಅಳವಡಿಸಲಾಗಿದ್ದ ಸುಮಾರು 15 ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಬಳಿಕ ಬೈಕ್ ನಂಬರ್ ಪತ್ತೆಹಚ್ಚಲಾಯಿತು.
ಆಧಾರದ ಮೇಲೆ ಪೆರ್ಲಂಪಾಡಿ ನಿವಾಸಿ ಉದಯ ಎಂಬಾತನನ್ನು ವಿಚಾರಣೆಗೊಳಪಡಿಸಿದಾಗ ಆತನೇ ಕೃತ್ಯ ಎಸಗಿದ್ದಾನೆಂದು ಖಚಿತಪಟ್ಟ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬೆಳ್ಳಾರೆ ಠಾಣೆಯ ಎಸ್ಐ ಡಿ.ಎನ್. ಈರಯ್ಯ ಅವರ ನೇತೃತ್ವದಲ್ಲಿ ಸತತ ಕಾರ್ಯಾಚರಣೆಯ ಫಲವಾಗಿ ಪ್ರಕರಣ ಬೇಧನೆಯಾಗಿದ್ದು, ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.






