
ಬಂಟ್ವಾಳ:ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳ ನಿವಾಸಿ ಹಸನಬ್ಬ ಎಂಬಾತನ ವಿರುದ್ಧ ಗೋ ಕಳವು ಹಾಗೂ ಗೋವಧೆ ಪ್ರಕರಣದಲ್ಲಿ ಕ್ರಮ ಜರುಗಿಸಿದ ಪೊಲೀಸರು, ಸಹಾಯಕ ಆಯುಕ್ತ ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳ ಆದೇಶದಂತೆ ಆರೋಪಿಯ ಮನೆ ಹಾಗೂ ಅಕ್ರಮ ಕಸಾಯಿಖಾನೆಯನ್ನು ಜಪ್ತಿ ಮಾಡಿದ್ದಾರೆ.
ಹಸನಬ್ಬನ ವಿರುದ್ಧ 2025ರಲ್ಲಿ ದಾಖಲಾದ ಅಕ್ರ 123/2025 ಪ್ರಕರಣ ಸೇರಿದಂತೆ, 2017 ಹಾಗೂ 2018ರಲ್ಲಿ ಗೋ ಕಳವು, ಗೋವಧೆ ಪ್ರಕರಣಗಳು ದಾಖಲಾಗಿದ್ದವು. ಈತನು ಕಳವು ಮಾಡಿದ ಜಾನುವಾರುಗಳನ್ನು ಮನೆಯಲ್ಲಿ ನಿರ್ಮಿಸಿದ್ದ ಅಕ್ರಮ ಕಸಾಯಿಖಾನೆಯಲ್ಲಿ ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದನೆಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಪೊಲೀಸರ ವರದಿಯ ಆಧಾರದಲ್ಲಿ, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಂ 8(4), 8(5) ಅನ್ವಯ, ದಿನಾಂಕ 25-09-2025ರಂದು ಪ್ರಕರಣ ಸಂಖ್ಯೆ ಎಂ.ಎ.ಜಿ/ಎಸ್ಆರ್.44/2025ರಂತೆ, ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಳ್ಳ ಪಾಡಿಯ ಮನೇ ನಂ. 6-54 ಹಾಗೂ 6-54(1) ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
👉 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಪ್ರಕರಣದಲ್ಲಿ ಮನೆ/ಅಕ್ರಮ ಕಸಾಯಿಖಾನೆ ಜಪ್ತಿ ಮಾಡಿರುವುದು ಇದೇ ಮೊದಲ ಬಾರಿಗೆ ನಡೆದಿದೆ.






