ಬೆಳಗಾವಿ: ಮಹಿಳೆಯರಿಗೆ ವರ್ಕ್ ಫ್ರಂ ಹೋಮ್ ಕೆಲಸ ನೀಡುವ ಹೆಸರಿನಲ್ಲಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಬೆಳಗಾವಿಯಲ್ಲಿ ಸಾವಿರಾರು ಮಹಿಳೆಯರನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು 8000 ಮಹಿಳೆಯರಿಂದ 12 ಕೋಟಿ ರೂ. ಹಣ ಪಡೆದ ವಂಚಕ ಸುದ್ದಿಯಿಲ್ಲದೆ ಪರಾರಿಯಾಗಿದ್ದಾನೆ. ಈ ಕುರಿತು ವಂಚಿತ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ತಮ್ಮ ಹಣವನ್ನು ಹಿಂತಿರುಗಿಸಲು ಒತ್ತಾಯಿಸಿದ್ದಾರೆ.

ಸೊಲ್ಲಾಪುರದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ಅಗರಬತ್ತಿ ಪ್ಯಾಕ್ ಮಾಡುವ ಮೂಲಕ ಹಣ ಗಳಿಬಹುದುದೆಂದು ಹೇಳಿ ತಮ್ಮನ್ನು ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರದ ಬಾಬಾಸಾಹೇಬ್ ಕೋಲೇಕರ್ ತನ್ನನ್ನು ಅಜಯ್ ಪಾಟೀಲ್ ಎಂದು ಪರಿಚಯಿಸಿಕೊಂಡಿದ್ದ. ಒಬ್ಬ ಮಹಿಳೆಯಿಂದ ಒಂದು ಗುರುತಿನ ಚೀಟಿ ರಚಿಸಲು 2,500 ರಿಂದ 5,000 ರೂ.ಗಳವರೆಗೆ ಹಣವನ್ನು ಸಂಗ್ರಹಿಸಿದ್ದ. ಪ್ರತಿಯೊಬ್ಬ ನೇಮಕಾತಿದಾರರು ಚೈನ್-ಮಾರ್ಕೆಟಿಂಗ್ ವ್ಯವಸ್ಥೆಯಡಿಯಲ್ಲಿ ಇನ್ನಿಬ್ಬರು ವ್ಯಕ್ತಿಗಳನ್ನು ಸಂಪರ್ಕಿಸುವಂತೆ ಒತ್ತಾಯಿಸಿದ್ದ.

ಈ ಯೋಜನೆಯು ಸರಪಳಿ-ಮಾರ್ಕೆಟಿಂಗ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು ಮತ್ತು ಸ್ವ-ಸಹಾಯ ಗುಂಪುಗಳಂತಹ ಮಹಿಳಾ ಗುಂಪುಗಳನ್ನು ಗುರಿಯಾಗಿಸಿಕೊಂಡಿತ್ತು ಎಂದು ಮಹಿಳೆಯರು ತಿಳಿಸಿದ್ದಾರೆ. ಪ್ರತಿ ಮಹಿಳೆಯರ ಮನೆಗೆ ಅಗರಬತ್ತಿಗಳನ್ನು ತಲುಪಿಸಲು ಆಟೋ ರಿಕ್ಷಾ ಬಾಡಿಗೆಯಾಗಿ 2,500 ರಿಂದ 5,000 ರೂ.ಗಳವರೆಗೆ ಮುಂಗಡ ಶುಲ್ಕವನ್ನು ಅವರೇ ಪಾವತಿಸಬೇಕಿತ್ತು. ಮಹಿಳೆಯರು ಅದನ್ನು ಪ್ಯಾಕ್ ಮಾಡಿ ಹಿಂತಿರುಗಿಸಬೇಕಾಗಿತ್ತು.

ಮನೆಯಲ್ಲಿ ಕುಳಿತುಕೊಂಡು ಅಗರಬತ್ತಿಗಳನ್ನು ಪ್ಯಾಕ್ ಮಾಡುವುದರಿಂದ ಪ್ರತಿ ತಿಂಗಳು 2,500 ರೂ. ಗಳಿಸಬಹುದು ಎಂದು ಮಹಿಳೆಯನ್ನು ವಂಚಕ ನಂಬಿಸಿದ್ದ. ಈ ಕೆಲಸಕ್ಕೆ ಇತರರನ್ನು ಸೇರಿಸಿಕೊಂಡರೆ ತಮ್ಮ ಗಳಿಕೆ ಹೆಚ್ಚಾಗುತ್ತದೆ ಎಂದೂ ಮಹಿಳೆಯರಿಗೆ ಹೇಳಿದ್ದ. ಭರವಸೆ ನೀಡಿದ ಪ್ರತಿಫಲ ಮಹಿಳೆಯರ ಕೈಗೆ ಸಿಗದಿದ್ದಾಗ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!