
ಪುತ್ತೂರು: ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿಯಲ್ಲಿ ಮುಸ್ಲಿಂ ಮಹಿಳೆಯರ ಕುರಿತು ಅವಮಾನಕಾರಿಯಾಗಿ ಮಾತನಾಡಿ, ದ್ವೇಷ ಪ್ರಚೋದನೆಯನ್ನು ಉಂಟುಮಾಡಿದ ಆರೋಪ ಎದುರಿಸುತ್ತಿರುವ ಪ್ರಭಾಕರ ಭಟ್ ಕುರಿತಾಗಿ ಪುತ್ತೂರು ಶಾಸಕರು ಮೌನ ವಹಿಸಿರುವುದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪ್ರಶ್ನಿಸಿದೆ.
ದ್ವೇಷ ಭಾಷಣದ ಪ್ರಕರಣಗಳಲ್ಲಿ ಸುಮೋಟೋ ಕ್ರಮ ಕೈಗೊಳ್ಳಬೇಕೆಂಬ ಸುಪ್ರೀಂ ಕೋರ್ಟ್ ನಿರ್ದೇಶನ ಇದ್ದರೂ, ಪ್ರಭಾಕರ ಭಟ್ ವಿರುದ್ಧ FIR ದಾಖಲು ಮಾಡಲು ಸಾಮಾಜಿಕ ಕಾರ್ಯಕರ್ತೆಯೊಬ್ಬರು ದೂರು ಸಲ್ಲಿಸಿದ ನಂತರವೇ ಪೊಲೀಸರು ಕ್ರಮ ಕೈಗೊಂಡರು ಎಂದು ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಅಶ್ರಫ್ ಬಾವು ಆರೋಪಿಸಿದ್ದಾರೆ.
“ಕ್ಷೇತ್ರದಲ್ಲಿ ನಡೆದ ದ್ವೇಷ ಭಾಷಣದ ಬಗ್ಗೆ ಡೈಲಾಗ್ ಕಿಂಗ್ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಹಿಸಿರುವುದು ಸಂಘಪ್ರೇಮದ ರಾಜಕೀಯದ ಸ್ಪಷ್ಟ ಉದಾಹರಣೆ” ಎಂದು ಅವರು ಟೀಕಿಸಿದ್ದಾರೆ.
ಅಲ್ಲದೇ, ಸಾಮಾನ್ಯ ವಿಚಾರಗಳಲ್ಲಿಯೇ ಪತ್ರಿಕಾಗೋಷ್ಠಿ ನಡೆಸುವ ಅಲ್ಪಸಂಖ್ಯಾತರ ಘಟಕದ ನಾಯಕರು ಈ ವಿಷಯದಲ್ಲಿ ಮೌನವಾಗಿರುವುದನ್ನೂ ಅವರು ಪ್ರಶ್ನಿಸಿದ್ದಾರೆ.
ಪ್ರಭಾಕರ ಭಟ್ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಿಲುವು ತಿಳಿಸಲು ಈ ನಾಯಕರೇ ಮುಂದಾಗಬೇಕು ಎಂದು ಅಶ್ರಫ್ ಬಾವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






