
ಬೆಳ್ತಂಗಡಿ, ನ.7:ಕಸಬಾ ಗ್ರಾಮದ ನಿವಾಸಿ, ಆಟೋ ಚಾಲಕರಾಗಿದ್ದ ಅಬ್ದುಲ್ ಬಶೀರ್ (50) ಅವರು ತಮ್ಮ ಮನೆಯ ಶೌಚಾಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತರಾಗಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರಗಳ ಪ್ರಕಾರ, ಮೃತರ ಪುತ್ರ ಸೂಹೈಲ್ (25) ಅವರು ನೀಡಿದ ದೂರಿನಲ್ಲಿ, ತಂದೆ ಅಬ್ದುಲ್ ಬಶೀರ್ ಅವರು ಆಟೋ ಚಾಲನೆ ವೃತ್ತಿ ಮಾಡಿಕೊಂಡಿದ್ದು, ನ.6ರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ವೇಳೆ ತಂದೆ ಸೇರಿದಂತೆ ಮನೆಯವರು ನಿದ್ರೆಯಲ್ಲಿದ್ದರು ಎಂದು ತಿಳಿಸಲಾಗಿದೆ.
ನ.6ರಂದು ಬೆಳಗ್ಗೆ ಸೂಹೈಲ್ ಅವರ ಸಹೋದರ ಮಹಮ್ಮದ್ ಸುಫಿಯಾನ್ ಶೌಚಾಲಯಕ್ಕೆ ತೆರಳಿದಾಗ, ಒಳಗಿನಿಂದ ಚಿಲಕ ಹಾಕಲ್ಪಟ್ಟು ಕರೆ ನೀಡಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬಾಗಿಲು ಬಲವಂತವಾಗಿ ತೆರೆದಾಗ, ಅಬ್ದುಲ್ ಬಶೀರ್ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತಕ್ಷಣವೇ ಕುಟುಂಬಸ್ಥರು ಅವರನ್ನು ಕೆಳಗಿಳಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ನಂ: 37/2025 ಹಾಗೂ ಕಲಂ 194 BNSS 2023 ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.






