
ಬಂಟ್ವಾಳ ತಾಲ್ಲೂಕಿನ ಅರಳ ಗ್ರಾಮದಲ್ಲಿ ನಡೆದ ಅಕ್ರಮ ಗೋಹತ್ಯೆ ಪ್ರಕರಣವನ್ನು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರು ಭೇದಿಸಿದ್ದು, ಸುಮಾರು 150 ಕೆಜಿ ಮಾಂಸ, ಮೂರು ಹಸುಗಳು ಹಾಗೂ ಒಂದು ಕರುವನ್ನು ರಕ್ಷಿಸಿದ್ದಾರೆ.
ನ.16ರಂದು ಬಂದ ಗುಪ್ತ ಮಾಹಿತಿಯ ಮೇರೆಗೆ ಪಿಎಸ್ಐ ಹಾಗೂ ಸಿಬ್ಬಂದಿ ದಾಳಿ ನಡೆಸಿದಾಗ, ಮನೆಯ ಆವರಣದಲ್ಲಿರುವ ಶೆಡ್ನಲ್ಲಿ ಮೂವರು ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವುದು ಪತ್ತೆಯಾಗಿದೆ. ದಾಳಿ ಸಂದರ್ಭದಲ್ಲಿ ಇಬ್ಬರು ಪರಾರಿಯಾಗಿದ್ದು, ಒಬ್ಬರನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿತು. ಬಂಧಿತನು ಮೈಯದಿ (57) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಮನೆಯಲ್ಲಿ ಅಕ್ರಮ ಕಸಾಯಿಖಾನೆಗಳನ್ನು ನಿರ್ಮಿಸಿ, ಮನೆ ವಿದ್ಯುತ್ ಸಂಪರ್ಕವನ್ನೇ ದುರುಪಯೋಗಪಡಿಸಿಕೊಂಡು ವಧೆ ನಡೆಸುತ್ತಿದ್ದರು. ಶೆಡ್ ಹಾಗೂ ಮನೆಯ ಆವರಣವನ್ನು ಪೊಲೀಸರು ಜಪ್ತಿ ಮಾಡಿ, ಮಾನ್ಯ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳಿಗೆ ಮುಟ್ಟುಗೋಲು ಮಾಡುವ ಕುರಿತು ವರದಿ ಸಲ್ಲಿಸಿದ್ದಾರೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಕ್ರ 172/2022 ದಾಖಲಾಗಿ,
– ಕರ್ನಾಟಕ ಜಾನುವಾರು ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಕಲಂ 4, 5, 7, 12
– ಪ್ರಾಣಿ ಹಿಂಸೆ ನಿಷೇಧ ಕಾಯಿದೆ ಕಲಂ 11(1)(ಡಿ) ಹಾಗೂ
– ಬಿಎನ್ಎಸ್ ಕಾಯಿದೆ ಕಲಂ 303(2), 307
ಅಡಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಮೈಯದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದಾಗಿ ತಿಳಿಸಲಾಗಿದ್ದು, ಪರಾರಿಯಾದ ಇಬ್ಬರ ಪತ್ತೆ ಕಾರ್ಯ ಮುಂದುವರಿದಿದೆ.






