
ಸಕಲೇಶಪುರ:ಶಾಸಕ ಸಿಮೆಂಟ್ ಮಂಜುನಾಥ್ ಅವರ ಜನಪರ ಕಾರ್ಯಶೈಲಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಮಳೆಯ ಸಂದರ್ಭದಲ್ಲಿ ರಸ್ತೆ ಹಾಗೂ ಜಮೀನುಗಳಿಗೆ ನೀರು ನುಗ್ಗುವ ಸಮಸ್ಯೆ ಪರಿಶೀಲಿಸುವ ಸಲುವಾಗಿ ಅವರು ಸ್ವತಃ ಸ್ಕೂಟರ್ ಚಾಲನೆ ಮಾಡಿ, ಪ್ಯಾಂಟ್ ಅನ್ನು ಮಡಚಿಕೊಂಡು ಕೆರೆಯ ನೀರಿನಲ್ಲಿ ಇಳಿದು ಸ್ಥಳ ಪರಿಶೀಲನೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಾಸನ ಸಮೀಪದ ಕಟ್ಟಾಯ ಹೋಬಳಿಯ ಲಕ್ಕನಾಯಕನಹಳ್ಳಿ ಕೆರೆಯಲ್ಲಿ ಮಳೆಯ ನೀರು ತುಂಬಿ ಸಮೀಪದ ರಸ್ತೆ ಹಾಗೂ ಕೃಷಿ ಜಮೀನಿಗೆ ನುಗ್ಗುತ್ತಿದ್ದ ಹಿನ್ನೆಲೆಯಲ್ಲಿ ಶಾಸಕ ಮಂಜುನಾಥ್ ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಮಂಡಿವರೆಗೆ ಪ್ಯಾಂಟ್ ಮಡಚಿಕೊಂಡು ಕೆರೆಯ ನೀರಿನಲ್ಲಿ ಇಳಿದು ಪರಿಸ್ಥಿತಿಯನ್ನು ಸ್ವತಃ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಕಟ್ಟಾಯ ಹೋಬಳಿ ಹಾಗೂ ಕಿತ್ತಾನೆ–ಭೀಕನಹಳ್ಳಿ ನಡುವಿನ ರಸ್ತೆಯನ್ನು ಸ್ವಯಂ ಸ್ಕೂಟರ್ ಚಾಲನೆ ಮೂಲಕ ವೀಕ್ಷಣೆ ನಡೆಸಿದರು. ಗ್ರಾಮದ ಸಮಸ್ಯೆಗಳನ್ನು ಸ್ಥಳದಲ್ಲೇ ತಿಳಿದುಕೊಳ್ಳುವ ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.






