
ಪುತ್ತೂರು ಕಸಬಾ ನಿವಾಸಿ, ನಿವೃತ್ತ ಪ್ರಾಂಶುಪಾಲರಾದ ಎ.ವಿ. ನಾರಾಯಣ (84) ಅವರ ಮನೆಯಲ್ಲಿ ದರೋಡೆಗೆ ಯತ್ನಿಸಿದ ಆರೋಪದಲ್ಲಿ ದಂಪತಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 17ರ ಮಧ್ಯರಾತ್ರಿ, ಹೆಲ್ಮೆಟ್ ಧರಿಸಿ ಮುಖ ಮುಚ್ಚಿಕೊಂಡು ಬಂದ ಇಬ್ಬರು ಅಪರಿಚಿತರು ಪಿರ್ಯಾದಿದಾರರ ಮನೆಯ ಹಿಂಬಾಗಿಲಿನಿಂದ ಒಳನುಗ್ಗಿ, ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ನಾರಾಯಣ ಹಾಗೂ ಅವರ ಪತ್ನಿಯನ್ನು ಬೆದರಿಸಲಾಗಿದ್ದು, ನಡೆದ ತಳ್ಳಾಟದಲ್ಲಿ ಪತ್ನಿಗೆ ಗಾಯವಾಗಿದೆ. ಪಿರ್ಯಾದಿದಾರರು ಜೋರಾಗಿ ಕೂಗಿದ ಪರಿಣಾಮ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಅದೃಷ್ಟವಶಾತ್ ಯಾವುದೇ ಸೊತ್ತು ಕಳ್ಳತನವಾಗಿರಲಿಲ್ಲ.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.127/2025, ಕಲಂ 307 ಜೊತೆಗೆ 3(5) ಬಿಎನ್ಎಸ್–2023ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಯ ಬಳಿಕ ಪೊಲೀಸರು ಪುತ್ತೂರು ಮುಡೂರು ನಿವಾಸಿ, ಪ್ರಸ್ತುತ ಪಂಜದಲ್ಲಿ ಬಾಡಿಗೆ ವಾಸವಾಗಿರುವ ಕಾರ್ತಿಕ್ ರಾವ್ (31) ಹಾಗೂ ಆತನ ಪತ್ನಿ ಕೆ.ಎಸ್. ಸ್ವಾತಿ ರಾವ್ (25) ಅವರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಮೋಟಾರುಸೈಕಲ್ನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಕಾರ್ತಿಕ್ ರಾವ್ ಸಹಾಯಕ ಅರ್ಚಕರಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.






