
ಮಂಗಳೂರು, ಜ.3: ಹೊಸ ವರ್ಷಾಚರಣೆಯ ಪ್ರಯುಕ್ತ ನಗರದಲ್ಲಿ ಮಾರಾಟ ಮಾಡಲು ತಂದಿದ್ದ ಸುಮಾರು 21 ಕೆ.ಜಿ 450 ಗ್ರಾಂ ತೂಕದ ಗಾಂಜಾವನ್ನು ಮಂಗಳೂರು ನಗರ ಪೊಲೀಸರು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ ನಗರದ 2ನೇ ಕ್ರಾಸ್ನ ‘ಬೆನಕ’ ಎಂಬ ಮನೆಯ ಬಳಿ ಕಾರಿನಲ್ಲಿ ಗಾಂಜಾವನ್ನು ಸಂಗ್ರಹಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಜ.3ರಂದು ಪೊಲೀಸರು ದಾಳಿ ನಡೆಸಿದರು.
ಈ ಸಂದರ್ಭದಲ್ಲಿ
ಪ್ರದೀಪ್ ಪೂಜಾರಿ (32) – ಉಳಾಯಿಬೆಟ್ಟು ಗ್ರಾಮ, ಗುರುಪುರ ಅಂಚೆ, ಮಂಗಳೂರು (ಹಾಲಿ ವಾಸ: ಪರಮೇಶ್ವರಿ ನಗರ, ಚೊಕ್ಕಬೆಟ್ಟು)
ಮತ್ತು
ವಸಂತ (42) – ಚಿತ್ರಾಪುರ, ಮಂಗಳೂರು
ಎಂಬವರನ್ನು ದಸ್ತಗಿರಿ ಮಾಡಲಾಗಿದೆ.
ಆರೋಪಿಗಳ ವಶದಿಂದ ಅಂದಾಜು ಮೌಲ್ಯ ರೂ.10.72 ಲಕ್ಷದ ಗಾಂಜಾ, 3 ಮೊಬೈಲ್ ಫೋನ್ಗಳು, ಗಾಂಜಾ ಸಾಗಣೆಗೆ ಬಳಸಿದ್ದ ಕೆಎ–04 ಎಂಡಿ–2532 ಸಂಖ್ಯೆಯ ಸ್ವಿಫ್ಟ್ ಕಾರು, 3 ಲಗೇಜ್ ಬ್ಯಾಗ್ಗಳು, ಗಾಂಜಾ ಸೇವನೆಗೆ ಬಳಸುವ ಸ್ಟ್ರೀಫ್ಸ್ ಹಾಗೂ ನಗದು ಹಣವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ರೂ.13.86 ಲಕ್ಷ ಎಂದು ಅಂದಾಜಿಸಲಾಗಿದೆ.
ಆರೋಪಿಗಳು ಗಾಂಜಾವನ್ನು ಡಿಸೆಂಬರ್ 29ರಂದು ಓಡಿಶಾದಿಂದ ತಂದಿದ್ದು, ಮಂಗಳೂರು ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇರುವ ಕಾರಣ ಮಾರಾಟ ಮಾಡಲು ಸಾಧ್ಯವಾಗದೆ ಕಾರಿನಲ್ಲೇ ಇಟ್ಟುಕೊಂಡಿದ್ದುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ.01/2026 ಅಡಿ **NDPS ಕಾಯ್ದೆಯ ಕಲಂ 8(C), 20(b)(ii)(C)**ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಬಂಧಿತ ಪ್ರದೀಪ್ ಪೂಜಾರಿ ವಿರುದ್ಧ ಈ ಹಿಂದೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ಹತ್ಯೆ ಯತ್ನ, ಎನ್ಡಿಪಿಎಸ್ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪತ್ತೆ ಕಾರ್ಯದಲ್ಲಿ ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ ಕೆ. ಅವರ ಮಾರ್ಗದರ್ಶನದಲ್ಲಿ ಸುರತ್ಕಲ್ ಠಾಣೆಯ ಪಿಐ ಪ್ರಮೋದ್ ಕುಮಾರ್, ಪಿಎಸ್ಐ ರಘುನಾಯ್ಕ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.






