
ಮಂಗಳೂರು: ಬಿಹಾರ ರಾಜ್ಯದಿಂದ ರೈಲು ಮೂಲಕ ಗಾಂಜಾವನ್ನು ಮಂಗಳೂರಿಗೆ ತಂದು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 03 ಜನವರಿ 2026 ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ ಕ್ರಾಸ್ ಬಳಿ ರಸ್ತೆ ಬದಿಯಲ್ಲಿ ಆರೋಪಿಗಳು ಸುಮಾರು 1 ಕೆ.ಜಿ ತೂಕದ ಮಾದಕ ವಸ್ತು ಗಾಂಜಾವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.
ಬಂಧಿತರನ್ನು ಸುನಿಲ್ ಕುಮಾರ್ (40), ನೆಪಾಳಿ ಸಿಂಗ್ ಅವರ ಪುತ್ರ, ಮೂಲ ನಿವಾಸಿ ಮಹದ್ದಿಪುರ, ಖಗರಿಯಾ, ಬಿಹಾರ (ಹಾಲಿ ವಾಸ: ಕೃಷ್ಣಾಪುರ ಕಾಟಿಪಳ್ಳ, ಸುರತ್ಕಲ್) ಹಾಗೂ ಬ್ರಿಜೇಶ್ ಶ್ರೀವಾಸ್ತವ (42), ರಾಧೇಶ್ಯಾಮ್ ಅವರ ಪುತ್ರ, ಭೌರಾಹಿ, ಮಿರ್ಜಾಪುರ, ಉತ್ತರ ಪ್ರದೇಶ (ಹಾಲಿ ವಾಸ: ಕೃಷ್ಣಾಪುರ ಕಾಟಿಪಳ್ಳ, ಸುರತ್ಕಲ್) ಎಂದು ಗುರುತಿಸಲಾಗಿದೆ.
ವಿಚಾರಣೆಯಲ್ಲಿ ಆರೋಪಿಗಳು ಬಿಹಾರ ರಾಜ್ಯದಲ್ಲಿ ಗಾಂಜಾವನ್ನು ಖರೀದಿಸಿ ರೈಲಿನಲ್ಲಿ ಮಂಗಳೂರಿಗೆ ತಂದು ಉತ್ತರ ಭಾರತದ ಕೂಲಿ ಕಾರ್ಮಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 08/2026, ಕಲಂ 20(b)(ii)(a) NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






