
: ರಾ.ಹೆ.75ರ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುನಲ್ಲಿ ರಿಕ್ಷಾ ಹಾಗೂ ಸ್ಕೂಟರ್ ಮಧ್ಯೆ ಢಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಮೂವರು ಹಾಗೂ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ರಿಕ್ಷಾ ಚಾಲಕ ನವಾಜ್ ಕಬಕ, ಪ್ರಯಾಣಿಕರಾದ, ಅಳಕೆಮಜಲು ನಿವಾಸಿಗಳಾದ ಅವ್ವಮ್ಮ, ಸುಹೈಲ್ ಹಾಗೂ ಸ್ಕೂಟರ್ ಸವಾರ ನೇರಳಕಟ್ಟೆ ನಿವಾಸಿ ಸಂಜೀವ ಅವರು ಗಾಯಗೊಂಡವರು.
ಮಾಣಿ ಕಡೆಯಿಂದ ಆಗಮಿಸಿದ ರಿಕ್ಷಾವು ಕುದ್ರೆಬೆಟ್ಟುನಲ್ಲಿ ಮೇಲ್ಸತುವೆಗೆ ಪ್ರವೇಶ ಮಾಡುವ ಸಮಯದಲ್ಲಿ ಕಲ್ಲಡ್ಕ ಕಡೆಯಿಂದ ಸರ್ವೀಸ್ ರಸ್ತೆಯಲ್ಲಿ ಬಂದ ಸ್ಕೂಟರ್ ಸವಾರ ರಸ್ತೆಯನ್ನು ಕ್ರಾಸ್ ಮಾಡುವ ವೇಳೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅವ್ವಮ್ಮ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಬಂಟ್ವಾಳ ಆಸ್ಪತ್ರೆಗೆ ಕರೆತರುವ ವೇಳೆ ಘಟನೆ ನಡೆದಿದ್ದು, ಅಪಘಾತದಲ್ಲಿ ಅವರಿಗೆ ಗಂಭೀರವಾಗಿ ಗಾಯವಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಉಳಿದಂತೆ ಇಬ್ಬರು ತುಂಬೆ ಹಾಗೂ ಮತ್ತೊಬ್ಬರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






