ಆಯುರ್ವೇದ ಔಷಧದ (Ayurvedic Medicine) ಹೆಸರಿನಲ್ಲಿ ಜನರಿಗೆ ವಂಚಿಸುತ್ತಿದ್ದ (Crime) ದೊಡ್ಡ ಜಾಲವೊಂದನ್ನು ನಾಸಿಕ್ (Nasik) ಪೊಲೀಸರು ಪತ್ತೆಹಚ್ಚಿದ್ದಾರೆ. ಲೈಂಗಿಕ ಸಾಮರ್ಥ್ಯ (Sexual Stamina) ಹೆಚ್ಚಿಸುವ ವಿಶೇಷ ಔಷಧ ಎಂದು ನಂಬಿಸಿ ಕೇವಲ ಸಾಮಾನ್ಯ ಜೇನುತುಪ್ಪವನ್ನು (Honey) ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಆರೋಪಿ ಅಶೋಕ್ ಖಾರತ್ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಶೋಕ್ ಖಾರತ್ ಮತ್ತು ಆತನ ತಂಡವು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಈ ವಂಚನೆ ಎಸಗುತ್ತಿದ್ದರು. “ಇದು ಕಾಡಿನ ಅಪರೂಪದ ಗಿಡಮೂಲಿಕೆಗಳಿಂದ ತಯಾರಿಸಿದ ಶಕ್ತಿವರ್ಧಕ” ಎಂದು ನಂಬಿಸಿ, ಸಣ್ಣ ಪ್ರಮಾಣದ ಜೇನುತುಪ್ಪಕ್ಕೆ ಸಾವಿರಾರು ರೂಪಾಯಿ ಪಡೆಯುತ್ತಿದ್ದರು. ಈ ರೀತಿ ನಾಸಿಕ್ನ ಒಬ್ಬ ವ್ಯಕ್ತಿಯಿಂದಲೇ ಸುಮಾರು 15 ಲಕ್ಷ ರೂಪಾಯಿಗಳನ್ನು ಪಡಕೊಂಡಿರುವುದು ಬೆಳಕಿಗೆ ಬಂದಿದೆ.
ಒಬ್ಬನೇ ವ್ಯಕ್ತಿಯಿಂದ 15 ಲಕ್ಷ್ ಲೂಟಿ!
ವಂಚನೆಗೊಳಗಾದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು, ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡಿದ್ದರು. ತನಿಖೆಯ ವೇಳೆ ಆರೋಪಿಯು ಯಾವುದೇ ವೈದ್ಯಕೀಯ ಅರ್ಹತೆ ಹೊಂದಿಲ್ಲದಿರುವುದು ಮತ್ತು ಮಾರಾಟ ಮಾಡುತ್ತಿದ್ದ ಪದಾರ್ಥವು ಕೇವಲ ಸಾಮಾನ್ಯ ಗುಣಮಟ್ಟದ ಜೇನುತುಪ್ಪವಾಗಿರುವುದು ಸಾಬೀತಾಗಿದೆ.
ಆಯುರ್ವೇದದ ಹೆಸರಿನಲ್ಲಿ ಜನರನ್ನು ಮರುಳು ಮಾಡುತ್ತಿದ್ದ ಜಾಲ ಕೇವಲ ಒಬ್ಬ ಸಂತ್ರಸ್ತನಿಂದಲೇ 15 ಲಕ್ಷ ರೂ. ಲೂಟಿ ಮಾಡಲಾಗಿದೆ. ಈ ವಂಚಕ ಜಾಲದ ಮುಖ್ಯ ಆರೋಪಿ ಅಶೋಕ್ ಖಾರತ್ ಈಗ ಪೊಲೀಸ್ ವಶದಲ್ಲಿದ್ದಾನೆ.
ಇಂತಹ ನಕಲಿ ವೈದ್ಯರು ಮತ್ತು ಔಷಧಗಳ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು ಹಾಗೂ ಯಾವುದೇ ಚಿಕಿತ್ಸೆ ಪಡೆಯುವ ಮೊದಲು ಅಧಿಕೃತ ವೈದ್ಯರನ್ನು ಸಂಪರ್ಕಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.














