ಹುಬ್ಬಳ್ಳಿ,ಮಾ.25- ಮಹಿಳೆಯೊಂದಿಗೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಮಾಜಿ ಶಾಸಕರೊಬ್ಬರ ಪುತ್ರನ ಕೊಲೆಯಾಗಿರುವುದು ಧಾರವಾಡ ಗ್ರಾಮೀಣ ಠಾಣೆ ಪೊಲೀಸರ ತನಿಖೆಯಿಂದ ತಿಳಿದುಬಂದಿದ್ದು, ಈ ಸಂಬಂಧ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಧಾರವಾಡದ ರಾಮಾಪುರ ಗ್ರಾಮದ ರೈಲ್ವೆ ಹಳಿ ಪಕ್ಕದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಕಾರಿನೊಳಗೆ ಗುರುತು ಸಿಗದಂತೆ ದುಷ್ಕರ್ಮಿಗಳು ರಾಜು ಬೋಳಶೆಟ್ಟಿ ಅವರನ್ನು ಸುಟ್ಟು ಪರಾರಿಯಾಗಿದ್ದರು.

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ರಾಜು ಸಾಲದ ರೂಪದಲ್ಲಿ ಹಣ ನೀಡುತ್ತಿದ್ದರು. ಇದುವರೆಗೂ 2 ಲಕ್ಷ ರೂ.ಗೂ ಹೆಚ್ಚು ಹಣ ಪಡೆದುಕೊಂಡಿದ್ದ ಮಹಿಳೆ ಇತ್ತೀಚೆಗೆ ರಾಜು ಅವರೊಂದಿಗೆ ಮನಸ್ತಾಪ ಹೊಂದಿದ್ದರು.

ನಿನ್ನೆಯೂ ಸಹ ರಾಜು ಅವರ ಜಮೀನಿನ ಬಳಿ ಮಹಿಳೆ ಹೋಗಿದ್ದು, ಆಕೆಯ ಪ್ರಿಯಕರ ಹಾಗೂ ಮಗ ಸೇರಿ ರಾಜು ಅವರನ್ನು ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸಲು ಬೆಂಕಿ ಹಚ್ಚಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಜಮೀನಿನಲ್ಲೇ ಕೊಲೆ ಮಾಡಿ ರಾಜು ಅವರ ಕಾರಿನ ಹಿಂದಿನ ಸೀಟಿನಲ್ಲಿ ಮೃತದೇಹವಿಟ್ಟು ಮೊದಲೇ ಮಾಡಿಕೊಂಡ ಸಂಚಿನಂತೆ ತಂದಿದ್ದ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಮಹಿಳೆ ಸೇರಿ ಮೂವರು ಪರಾರಿಯಾಗಿದ್ದರು.ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಮಹಿಳೆ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!