ವಿಟ್ಲ: ರಾಜ್ಯ ಸರ್ಕಾರದ ಬಜೆಟ್ನಲ್ಲಿ ಘೋಷಿಸಲ್ಪಟ್ಟ ಮಾಣಿ ಹಾಗೂ ಸಜಿಪನಡು ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಸರ್ಕಾರ ನಿಗದಿಪಡಿಸಿದೆ.
ಹೊಸ ಠಾಣೆಗಳು ಸ್ಥಾಪನೆಯಾದ ಬಳಿಕ ಪೊಲೀಸ್ ಇಲಾಖೆಯ ಮೇಲಿನ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ. ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡು, ಸಿಬ್ಬಂದಿ ನೇಮಕಾತಿ ನಡೆದ ನಂತರವೇ ಈ ಠಾಣೆಗಳು ಕಾರ್ಯಾರಂಭ ಮಾಡಲಿವೆ ಎಂದು ತಿಳಿದುಬಂದಿದೆ.
ವಿಟ್ಲ, ಪುತ್ತೂರು ನಗರ, ಬಂಟ್ವಾಳ ಗ್ರಾಮಾಂತರ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿದ್ದ ಕೆಲವು ಗ್ರಾಮಗಳನ್ನು ವಿಭಜಿಸಿ ಹೊಸ ಠಾಣೆಗಳಿಗೆ ಸೇರಿಸಲಾಗಿದೆ. ಮಾಣಿ ಪೊಲೀಸ್ ಠಾಣೆಗೆ 13 ಗ್ರಾಮಗಳು ಹಾಗೂ ಸಜಿಪನಡು ಠಾಣೆಗೆ 11 ಗ್ರಾಮಗಳ ವ್ಯಾಪ್ತಿ ನಿಗದಿಯಾಗಿದೆ.
ಮಾಣಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳು: ಇಡ್ಕಿದು, ಕೆದಿಲ, ಕಬಕ, ಕೊಡಿಪ್ಪಾಡಿ, ಗೋಳ್ತಮಜಲು, ಬಾಳ್ತಿಲ, ಪೆರಾಜೆ, ಮಾಣಿ, ಅನಂತಾಡಿ, ಬರಿಮಾರು, ನೆಟ್ಟಮುತ್ತೂರು, ಶಂಭೂರು ಹಾಗೂ ಕಡೇಶಿವಾಲಯ.
ಈ ಗ್ರಾಮಗಳಲ್ಲಿ ಬರಿಮಾರು, ಶಂಭೂರು ಮತ್ತು ಕಡೇಶಿವಾಲಯ ಗ್ರಾಮಗಳು ಪ್ರಸ್ತುತ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿದ್ದು, ಕೆದಿಲ, ಕೊಡಿಪ್ಪಾಡಿ ಮತ್ತು ಕಬಕ ಗ್ರಾಮಗಳು ಪುತ್ತೂರು ನಗರ ಠಾಣೆ ವ್ಯಾಪ್ತಿಗೆ ಸೇರಿದ್ದವು. ಇಡ್ಕಿದು , ಪೆರಾಜೆ, ನೆಟ್ಟಮುತ್ತೂರು, ಅನಂತಾಡಿ ಮತ್ತು ಮಾಣಿ ಗ್ರಾಮಗಳು ವಿಟ್ಲ ಠಾಣೆ ವ್ಯಾಪ್ತಿಯಲ್ಲಿದ್ದರೆ, ಗೋಳ್ತಮಜಲು ಮತ್ತು ಬಾಳ್ತಿಲ ಗ್ರಾಮಗಳು ಬಂಟ್ವಾಳ ನಗರ ಠಾಣೆ ವ್ಯಾಪ್ತಿಯಲ್ಲಿ ಸೇರಿದ್ದವು.














