ಪುತ್ತೂರು: ಯಕ್ಷಗಾನ ತಾಳಮದ್ದಳೆಯ ಮಹಿಳಾ ಅರ್ಥದಾರಿಯಾಗಿ ಗುರುತಿಸಿಕೊಂಡಿದ್ದ ಧೀಶಕ್ತಿ ಮಹಿಳಾ ಯಕ್ಷ ಬಳಗದ ಸದಸ್ಯೆ ಜಯಲಕ್ಷ್ಮಿ ವಿ. ಭಟ್ (61) ಅವರು ನಿಧನರಾದರು.
ಕಳೆದ 12 ವರ್ಷಗಳಿಂದ ಧೀಶಕ್ತಿ ಮಹಿಳಾ ಯಕ್ಷ ಬಳಗದಲ್ಲಿ ಸಕ್ರಿಯರಾಗಿದ್ದ ಅವರು, 300ಕ್ಕೂ ಹೆಚ್ಚು ವೇದಿಕೆಗಳಲ್ಲಿ ನಲವತ್ತಕ್ಕೂ ಅಧಿಕ ಪ್ರಸಂಗಗಳಲ್ಲಿ ಪ್ರಮುಖ ಪಾತ್ರಗಳ ಅರ್ಥವನ್ನು ನಿರ್ವಹಿಸಿದ್ದರು. ಬಳಗದ ದಶಮಾನೋತ್ಸವ ಸಂದರ್ಭದಲ್ಲಿ ಗೌರವಕ್ಕೂ ಪಾತ್ರರಾಗಿದ್ದರು. ಖ್ಯಾತ ಪುರುಷ ಅರ್ಥಧಾರಿಗಳ ಜೊತೆಗೂ ಅರ್ಥ ಹೇಳಿದ ಅನುಭವ ಹೊಂದಿದ್ದ ಅವರು, ವೇಷಧಾರಿಯಾಗಿ ಕೂಡ ರಂಗವೇರಿದ್ದರು.
ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಶಿಕ್ಷಣ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದ ಅವರು, ಗಮಕ ಕಲಾ ಸಂಘ, ಸಂಸ್ಕಾರ ಭಾರತೀ, ಲಯನೆಸ್ ಕ್ಲಬ್, ವೈಷ್ಣವಿ ವೈದೇಹಿ ಭಜನಾ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸದಸ್ಯೆಯಾಗಿದ್ದರು.
ಮೃತರು ಪತಿ ನಿವೃತ್ತ ಕ್ಯಾಂಪೋ ಮ್ಯಾನೇಜರ್ ವೆಂಕಟೇಶ ಭಟ್ (ಕುಕ್ಕುಪುಣಿ), ಪುತ್ರ ಕರ್ನಾಟಕ ಬ್ಯಾಂಕ್ ಉದ್ಯೋಗಿ ವಿಶ್ವಾಸ್ ಸುಬ್ರಮಣ್ಯ, ಸೊಸೆ ಶಿಕ್ಷಕಿ ಸುಪ್ರಿಯಾ ವಿಶ್ವಾಸ್ ಹಾಗೂ ಮೊಮ್ಮಗಳು ಶಿವಾನಿ ಅವರನ್ನು ಅಗಲಿದ್ದಾರೆ.














