ಪುತ್ತೂರು: ಆರ್ಯಾಪು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಉಚಿತ ವೈದ್ಯಕೀಯ ಶಿಬಿರವು 50ನೇ ತಿಂಗಳಿಗೆ ಕಾಲಿಟ್ಟಿದೆ. 50ನೇ ಶಿಬಿರ ಮೇ 3ರಂದು ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಡಾ. ಸುರೇಶ್ ಪುತ್ತೂರಾಯರ ಪರಿಕಲ್ಪನೆಯಲ್ಲಿ 2022ರ ಏಪ್ರಿಲ್ 3ರಂದು ಆರಂಭವಾದ ಈ ಶಿಬಿರವು ಪ್ರತಿ ತಿಂಗಳ ಮೊದಲ ಭಾನುವಾರ ನಡೆಯುತ್ತಿದ್ದು, ಈಗಾಗಲೇ 49 ಶಿಬಿರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನುರಿತ ತಜ್ಞ ವೈದ್ಯರ ತಂಡದಿಂದ ವಿವಿಧ ವಿಭಾಗಗಳಲ್ಲಿ ಉಚಿತ ತಪಾಸಣೆ, ಚಿಕಿತ್ಸೆ ಹಾಗೂ ಔಷಧಿ ವಿತರಣೆ ನಡೆಯುತ್ತಿದೆ.
ಶಿಬಿರದಲ್ಲಿ ಜನರಲ್ ಮೆಡಿಸಿನ್, ಹೃದಯ, ಶ್ವಾಸಕೋಶ, ಮಕ್ಕಳ, ಸ್ತ್ರೀರೋಗ, ಎಲುಬು-ಕೀಲು, ಚರ್ಮ, ಕಿವಿ-ಮೂಗು-ಗಂಟಲು, ಕಣ್ಣು, ದಂತ, ಆಯುರ್ವೇದ ಹಾಗೂ ಹೋಮಿಯೋಪತಿ ಸೇರಿದಂತೆ 15 ವಿಭಾಗಗಳಲ್ಲಿ ಸೇವೆ ಲಭ್ಯ. ಇಸಿಜಿ, ಮಧುಮೇಹ, ರಕ್ತದ ಒತ್ತಡ ಸೇರಿದಂತೆ ವಿವಿಧ ಪರೀಕ್ಷೆಗಳೂ ಉಚಿತವಾಗಿ ನಡೆಯುತ್ತಿವೆ.
50ನೇ ಶಿಬಿರದ ಅಂಗವಾಗಿ ಮೇ 2ರಂದು ರಂಗಪೂಜೆ, ಮೇ 3ರಂದು ಧನ್ವಂತರಿ ಹವನ, ಉದ್ಘಾಟನೆ ಹಾಗೂ ಆರೋಗ್ಯ ಜಾಗೃತಿ ಉಪನ್ಯಾಸಗಳು ನಡೆಯಲಿವೆ. ಈ ಸಂದರ್ಭದಲ್ಲಿ ವೈದ್ಯರು ಹಾಗೂ ದಾನಿಗಳನ್ನು ಗೌರವಿಸಲಾಗುತ್ತದೆ.
ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 10,000ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದು, ರೂ.1 ಕೋಟಿಗೂ ಅಧಿಕ ಮೊತ್ತದ ಆರೋಗ್ಯ ಸೇವೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.














