ಓದಿಸಬೇಕಾದ ಶಿಕ್ಷಕರೇ ವಿದ್ಯಾರ್ಥಿನಿಯ ಪಾಲಿಗೆ ಯಮರಾಗಿದ್ದಾರೆ ಎಂಬ ಆರೋಪ ಕೇಳಿಬಂದಿರುವ ದುರ್ಘಟನೆ ತೆಲಂಗಾಣದಲ್ಲಿ ನಡೆದಿದೆ. ಸಣ್ಣ ತಪ್ಪಿಗಾಗಿ ನಿರಂತರ ಅವಮಾನ ಮತ್ತು ಮಾನಸಿಕ ಕಿರುಕುಳ ಅನುಭವಿಸಿದ್ದ ಬಿಟೆಕ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆ ಬರೆದಿರುವ ಆತ್ಮಹತ್ಯೆ ಪತ್ರ ಎಲ್ಲರ ಮನಕಲಕುವಂತಿದೆ.
ಮನಿಕೊಂಡದ ಶ್ರೀರಾಮನಗರ ಕಾಲೋನಿಯ ನಿವಾಸಿ ಶ್ರೇಯಾ, ಇಬ್ರಾಹಿಂಬಾಗ್ನ ವಾಸವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಟೆಕ್ ವ್ಯಾಸಂಗ ಮಾಡುತ್ತಿದ್ದರು. ಮೊದಲ ವರ್ಷದ ಪರೀಕ್ಷೆಯ ವೇಳೆ ತಿಳಿಯದೆ ಮೊಬೈಲ್ ಫೋನ್ ಅನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಿದ್ದರು. ಅದು ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಶಿಕ್ಷಕರಿಗೆ ಮನವಿ ಮಾಡಿದರೂ, ಅವರು ಆಕೆಯನ್ನು ಪರೀಕ್ಷೆಯಿಂದ ಡಿಬಾರ್ ಮಾಡಿದ್ದರು.ಮೂರು ತಿಂಗಳಿಂದ ನಿರಂತರ ಕಿರುಕುಳ ಆರೋಪಎರಡನೇ ವರ್ಷ ಆರಂಭವಾದ ಬಳಿಕ ಕಾಲೇಜಿನ ಕೆಲ ಸಿಬ್ಬಂದಿ ಮತ್ತು ಉಪನ್ಯಾಸಕರು ಶ್ರೇಯಾಳನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಅವಮಾನಿಸುತ್ತಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಕಳೆದ ಮೂರು ತಿಂಗಳಿಂದ ತರಗತಿಯಲ್ಲಿ ಸಹಪಾಠಿಗಳ ಎದುರೇ ಅವಮಾನಕಾರಿ ಮಾತುಗಳು, ವ್ಯಂಗ್ಯ, ನಿಂದನೆಗಳನ್ನು ಮಾಡುತ್ತಿದ್ದು, ಇದರಿಂದ ಆಕೆ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.
ಆತ್ಮಹತ್ಯೆ ಪತ್ರದಲ್ಲಿ ನೋವಿನ ಮಾತುಗಳುಶ್ರೇಯಾ ಬರೆದಿರುವ ಆತ್ಮಹತ್ಯೆ ಪತ್ರದಲ್ಲಿ, “ನಿನಗೆ ನಾಚಿಕೆ, ಮಾನ-ಗೌರವವೇ ಇಲ್ಲ. ಕೆಲವು ಜೀವನಗಳು ಎಂದಿಗೂ ಬದಲಾಗುವುದಿಲ್ಲ ಎಂದು ಶಿಕ್ಷಕಿಯೊಬ್ಬರು ಎಲ್ಲರ ಮುಂದೆ ಅವಮಾನಿಸುತ್ತಿದ್ದರು. ಈ ಬಾರಿ ಪರೀಕ್ಷೆಯಲ್ಲಿ ನೀನೇ ಸಿಕ್ಕಿಬೀಳುತ್ತೀಯೆಂದುಕೊಂಡಿದ್ದೆ, ಆದರೆ ಬೇರೆವರು ಸಿಕ್ಕಿಬಿದ್ದರು ಎಂದು ಮತ್ತೊಬ್ಬರು ಪ್ರತಿದಿನ ವ್ಯಂಗ್ಯವಾಡುತ್ತಿದ್ದರು” ಎಂದು ಉಲ್ಲೇಖಿಸಿದ್ದಾಳೆ.ಇನ್ನೂ, “ಅಮ್ಮಾ, ಅಪ್ಪಾ… ನನ್ನನ್ನು ಕ್ಷಮಿಸಿ. ಕಾಲೇಜಿನಲ್ಲಿನ ಕಿರುಕುಳವನ್ನು ನಾನು ಸಹಿಸಿಕೊಳ್ಳಲು ಆಗುತ್ತಿಲ್ಲ. ನನ್ನ ಸಾವಿನ ಸುದ್ದಿ ಕಾಲೇಜಿನವರಿಗೆ ತಿಳಿಯದಂತೆ ನೋಡಿ. ನನ್ನ ಸಾವಿಗೆ ಅವರು ದುಃಖಪಡುವುದಿಲ್ಲ, ಸಂತೋಷಪಡುತ್ತಾರೆ” ಎಂದು ಬರೆದು ತನ್ನ ನೋವನ್ನು ವ್ಯಕ್ತಪಡಿಸಿದ್ದಾಳೆ.
ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ತಮ್ಮ ಮಗಳ ಸಾವಿಗೆ ಕಾರಣರಾದ ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ







