ಮಂಗಳೂರು: ಕೆಎಂಸಿ ಆಸ್ಪತ್ರೆ ಮಂಗಳೂರಿನ ವೈದ್ಯರು 94 ವರ್ಷದ ಮಹಿಳೆಗೆ ತುರ್ತು ಮೆಕ್ಯಾನಿಕಲ್ ಥ್ರಾಂಬೆಕ್ಟಮಿ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿ, ಪಾರ್ಶ್ವವಾಯುವಿನಿಂದ ಉಂಟಾಗಿದ್ದ ಗಂಭೀರ ಸ್ಥಿತಿಯಿಂದ ಚೇತರಿಸಿಕೊಳ್ಳುವಂತೆ ಮಾಡಿದ್ದಾರೆ.ಮಹಿಳೆಗೆ ದೇಹದ ಎಡಭಾಗದಲ್ಲಿ ಹಠಾತ್ ದುರ್ಬಲತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಡಾ. ರೋಹಿತ್ ಪೈ ಹಾಗೂ ಇಂಟರ್ವೆನ್ಶನಲ್ ನ್ಯೂರೋರೇಡಿಯಾಲಜಿಸ್ಟ್ ಡಾ. ಕೀರ್ತಿರಾಜ್ ಬಿ. ನೇತೃತ್ವದ ತಂಡ ಚಿಕಿತ್ಸೆ ಆರಂಭಿಸಿತು.ಪರಿಶೀಲನೆಯ ವೇಳೆ ಮೆದುಳಿನ ಬಲಭಾಗದ ಮಿಡಲ್ ಸೆರೆಬ್ರಲ್ ಆರ್ಟರಿಯಲ್ಲಿ ರಕ್ತನಾಳ ಮುಚ್ಚಿಕೊಂಡು ತೀವ್ರ ಇಸ್ಕೆಮಿಕ್ ಸ್ಟ್ರೋಕ್ ಉಂಟಾಗಿರುವುದು ದೃಢಪಟ್ಟಿತು. ಬಳಿಕ ನಡೆಸಿದ ಡಿಜಿಟಲ್ ಸಬ್ಟ್ರಾಕ್ಷನ್ ಆಂಜಿಯೋಗ್ರಫಿ ಪರೀಕ್ಷೆಯಲ್ಲಿ ಮೆದುಳಿಗೆ ರಕ್ತ ಪೂರೈಸುವ ಪ್ರಮುಖ ಧಮನಿಯಾದ ಬಲ ಇಂಟರ್ನಲ್ ಕ್ಯಾರೋಟಿಡ್ ಆರ್ಟರಿ ಸಂಪೂರ್ಣವಾಗಿ ರಕ್ತದ ಹೆಪ್ಪುಗಟ್ಟುವಿಕೆಯಿಂದ ಮುಚ್ಚಿಕೊಂಡಿರುವುದು ಪತ್ತೆಯಾಯಿತು.ಕುಟುಂಬದವರ ಒಪ್ಪಿಗೆಯೊಂದಿಗೆ ಆಸ್ಪತ್ರೆಗೆ ದಾಖಲಾದ ಒಂದು ಗಂಟೆಯೊಳಗೆ ವೈದ್ಯರು ತುರ್ತು ಮೆಕ್ಯಾನಿಕಲ್ ಥ್ರಾಂಬೆಕ್ಟಮಿ ನಡೆಸಿದರು. ಈ ಚಿಕಿತ್ಸೆಯಲ್ಲಿ ಕ್ಯಾಥೆಟರ್ ಮೂಲಕ ರಕ್ತದ ಗಡ್ಡೆಯನ್ನು ತೆರವುಗೊಳಿಸಿ ಮೆದುಳಿಗೆ ರಕ್ತಸಂಚಾರವನ್ನು ಪುನಃ ಸ್ಥಾಪಿಸಲಾಯಿತು.ಚಿಕಿತ್ಸೆಯ ಬಳಿಕ ಮಹಿಳೆಯ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆಗೆ ಸಹಾಯದೊಂದಿಗೆ ನಡೆಯುವಷ್ಟು ಚೇತರಿಸಿಕೊಂಡಿದ್ದರು ಎಂದು ಆಸ್ಪತ್ರೆ ತಿಳಿಸಿದೆ.ಈ ಕುರಿತು ಡಾ. ರೋಹಿತ್ ಪೈ ಮಾತನಾಡಿ, “ಪಾರ್ಶ್ವವಾಯು ತುರ್ತು ವೈದ್ಯಕೀಯ ಪರಿಸ್ಥಿತಿ. ಪ್ರತಿಯೊಂದು ನಿಮಿಷವೂ ಅಮೂಲ್ಯವಾಗಿದ್ದು, ವಯಸ್ಸು ಅತ್ಯಾಧುನಿಕ ಚಿಕಿತ್ಸೆಗೆ ಅಡ್ಡಿಯಾಗಬಾರದು. ರೋಗಿಯನ್ನು ಶೀಘ್ರ ಆಸ್ಪತ್ರೆಗೆ ಕರೆತಂದು ಸಮಯೋಚಿತ ಚಿಕಿತ್ಸೆ ನೀಡಿದರೆ ಉತ್ತಮ ಫಲಿತಾಂಶ ಸಾಧ್ಯ” ಎಂದು ಹೇಳಿದರು.ಡಾ. ಕೀರ್ತಿರಾಜ್ ಬಿ. ಮಾತನಾಡಿ, “ಮೆಕ್ಯಾನಿಕಲ್ ಥ್ರಾಂಬೆಕ್ಟಮಿ ಮೂಲಕ ಮೆದುಳಿನ ರಕ್ತಸಂಚಾರವನ್ನು ಪುನಃ ಸ್ಥಾಪಿಸಿ ಶಾಶ್ವತ ಹಾನಿಯನ್ನು ತಪ್ಪಿಸಬಹುದು. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆತರೆ 90 ವರ್ಷ ಮೇಲ್ಪಟ್ಟವರೂ ಉತ್ತಮ ಚೇತರಿಕೆ ಸಾಧಿಸಬಹುದು” ಎಂದು ತಿಳಿಸಿದರು.ಪಾರ್ಶ್ವವಾಯುವಿನ ಲಕ್ಷಣಗಳನ್ನು ತಕ್ಷಣ ಗುರುತಿಸಿ ವಿಳಂಬವಿಲ್ಲದೆ ಆಸ್ಪತ್ರೆಗೆ ದಾಖಲಿಸಿದರೆ ಶಾಶ್ವತ ಅಂಗವೈಕಲ್ಯವನ್ನು ತಪ್ಪಿಸಿ, ಸಾಮಾನ್ಯ ಜೀವನಕ್ಕೆ ಮರಳುವ ಸಾಧ್ಯತೆ ಹೆಚ್ಚುತ್ತದೆ ಎಂದು ಕೆಎಂಸಿ ಆಸ್ಪತ್ರೆ ತಿಳಿಸಿದೆ.









