
ಬೆಂಗಳೂರಿನ ವೈಯಾಲಿಕಾವಲ್ನ ಮನೆಯೊಂದರಲ್ಲಿ ಮಹಾಲಕ್ಷ್ಮಿ ಎನ್ನುವ ಮಹಿಳೆಯ ಶವವನ್ನು ತುಂಡು ತುಂಡು ಮಾಡಿ ಫ್ರಿಡ್ಜ್ನಲ್ಲಿಟ್ಟಿರುವ ಪ್ರಕರಣವು ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ. ಈ ಕೇಸ್ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೊಲೆ ಆರೋಪಿ ಯಾರು ಎನ್ನುವ ಸುಳಿವು ಸಿಕ್ಕಿದೆ ಎಂದು ವರದಿಯಾಗಿದೆ.
ಇಂದು ಪ್ರೆಸ್ಮೀಟ್ ನಡೆಸಿದ ಬೆಂಗಳೂರು ಸಿಟಿ ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರು ಈ ಕೇಸ್ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ವೈಯಾಲಿಕಾವಲ್ ನಿವಾಸಿ ಮಹಾಲಕ್ಷ್ಮೀ ಕೊಲೆ ಪ್ರಕರಣದ ಆರೋಪಿಯ ಗುರುತು ಪತ್ತೆಯಾಗಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.
ಕೊಲೆ ಆರೋಪಿಯು ಹೊರ ರಾಜ್ಯದವನು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಆತ ಬೆಂಗಳೂರಿನಲ್ಲೇ ವಾಸವಾಗಿದ್ದ ಎಂಬ ವಿಚಾರ ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಆರೋಪಿಯ ಹೆಸರು, ಫೋಟೋ ಹಾಗೂ ಇನ್ನಿತರ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಆರೋಪಿಗಾಗಿ ಹುಡುಕಾಟ ಶುರು ಮಾಡಿರುವ ಪೊಲೀಸರು ಹೊರ ರಾಜ್ಯಗಳಿಗೆ ಎರಡು ತಂಡಗಳಾಗಿ ಹೊರಟಿದ್ದಾರೆ. ಪಶ್ಚಿಮ ಬಂಗಾಳ ಹಾಗೂ ಬಿಹಾರಕ್ಕೆ ಪೊಲೀಸರು ತೆರಳಿದ್ದು ಕೊಲೆ ಆರೋಪಿಗಾಗಿ ಬಲೆ ಬೀಸಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ?: ನಿನ್ನೆ ಮಹಾಲಕ್ಷ್ಮಿ ಎನ್ನುವ ಮಹಿಳೆಯ ಮೃತದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್ನಲ್ಲಿಟ್ಟಿರುವ ಭಯಾನಕ ಸಂಗತಿಯೊಂದು ನಗರದ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿಂದೆ ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಮಾದರಿಯಲ್ಲೇ ಮಹಾಲಕ್ಷ್ಮಿ ಅವರನ್ನು ಕೊಲೆ ಮಾಡಿ, ಮೃತದೇಹವನ್ನು 50 ತುಂಡುಗಳಾಗಿ ಕತ್ತರಿಸಿ ಮನೆಯ ಫ್ರಿಡ್ಜ್ನಲ್ಲಿ ಇಡಲಾಗಿತ್ತು.
ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದ ಅನುಮಾನದ ಮೇರೆಗೆ ಮಾಲೀಕರು ಈಕೆಯ ಸಂಬಂಧಿಕರಿಗೆ ಮಾಹಿತಿ ನೀಡಿದ ಬಳಿಕ ಮೃತರ ತಾಯಿ ಮನೆಗೆ ಬಂದಿದ್ದರು. ಫ್ರಿಡ್ಜ್ ತೆರೆದು ನೋಡಿದಾಗ ಒಳಗೆ ಪೀಸ್ ಪೀಸ್ ಆಗಿದ್ದ ಮಹಾಲಕ್ಷ್ಮಿಯ ಮೃತದೇಹ ಕಂಡು ಕಿರುಚಿಕೊಂಡು ಓಡಿದ್ದರು. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ, ಕೇಸ್ ದಾಖಲಿಸಿಕೊಂಡಿದ್ದರು. ಮರಣೋತ್ತರ ಪರೀಕ್ಷೆಗೆ ದೇಹದ ತುಂಡುಗಳನ್ನು ಕಳಿಸಿಕೊಟ್ಟಿದ್ದರು.
ಮೃತ ಮಹಾಲಕ್ಷ್ಮಿಯು ಮೆನ್ಸ್ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡಿಕೊಂಡಿದ್ದ ಉತ್ತರಾಖಂಡದ ಅಶ್ರಫ್ ಎಂಬಾತನ ಜೊತೆ ಸಲುಗೆಯಿಂದ ಇದ್ದರು. ಹಾಗಾಗಿ ಈತನ ಮೇಲೆ ಮಹಾಲಕ್ಷ್ಮಿ ಗಂಡ ಹಾಗೂ ಕುಟುಂಬಸ್ಥರು ದೂರು ನೀಡಿದ್ದರು. ಅಲ್ಲದೆ, ಮಹಾಲಕ್ಷ್ಮಿ ಜೊತೆ ಕೆಲಸ ಮಾಡುತ್ತಿದ್ದ ಮುಕ್ತ, ಶಶಿಧರ್, ಸುನೀಲ್ ಎಂಬುವವರ ಮೇಲೆಯೂ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಹಾಗಾಗಿ ಈ ನಾಲ್ವರಿಗಾಗಿ ಪೊಲೀಸರು ಬಲೆ ಬೀಸಿದ್ದರು.
ಸದ್ಯ ಅಶ್ರಫ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಮಹಾಲಕ್ಷ್ಮಿ ಜೊತೆಗೆ ನನಗೆ ಅಫೇರ್ ಇದ್ದಿದ್ದು ನಿಜ ಎಂದು ಸತ್ಯ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆರು ತಿಂಗಳ ಹಿಂದೆ ಮಹಾಲಕ್ಷ್ಮಿ ಜೊತೆಗೆ ನಾನು ಕ್ಲೋಸ್ ಆಗಿದ್ದೆ. ಆದ್ರೆ ಈ ಕೊಲೆ ಮಾಡಿರುವುದು ನಾನಲ್ಲ. ನಮ್ಮ ಅಫೇರ್ ವಿಚಾರ ಕುಟುಂಬಸ್ಥರಿಗೆ ತಿಳಿದು ದೊಡ್ಡ ಜಗಳವಾಯ್ತು. ಬಳಿಕ ನಾನು ಮಹಾಲಕ್ಷ್ಮಿ ತಂಟೆಗೆ ಹೋಗಲಿಲ್ಲ. ಆರು ತಿಂಗಳಿಂದ ನಾವಿಬ್ಬರೂ ದೂರ ಇದ್ದೇವೆ. ಈ ಕೊಲೆಗೂ ನನಗೂ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದ್ದಾನಂತೆ.
ಆದರೆ ಪೊಲೀಸರು ಆರೋಪಿಯ ಗುರುತು ಪತ್ತೆಯಾಗಿದೆ ಎಂದು ಸುಳಿವು ನೀಡಿದ್ದು, ಅಶ್ರಫ್ ಅಲ್ಲದೆ ಮತ್ಯಾರು ಮಹಾಲಕ್ಷ್ಮಿಯನ್ನು ಕೊಲೆ ಮಾಡಿರಬಹುದು? ಎನ್ನುವ ಪ್ರಶ್ನೆ ಎಲ್ಲರಲ್ಲೂ ಎದುರಾಗಿದೆ. ಸದ್ಯ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.







