ಬೆಂಗಳೂರು,ಅ.10- ಕನ್ನಡ ಪತ್ರಿಕಾರಂಗದಲ್ಲಿ ಕ್ರೈಂ ಗಣೇಶ್‌ ಎಂದೇ ಗುರುತಿಸಿಕೊಂಡಿದ್ದ ಪತ್ರಕರ್ತ ಗಣೇಶ್‌ ಇಹ ಲೋಕ ತ್ಯಜಿಸಿದ್ದಾರೆ.
ಕಳೆದ 20 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಅನಾರೋಗ್ಯದಿಂದಾಗಿ ನಗರದ ಜೈನ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಮೂಲತಃ ಮಾಗಡಿ ತಾಲೂಕಿನ ತಾಳೆಕೆರೆಯ ಗಂಗಯ್ಯ ಮತ್ತು ಕೆಂಪಮ್ಮ ದಂಪತಿ ಪುತ್ರರಾಗಿದ್ದ ಗಣೇಶ್‌ ಅವರು ಪತ್ನಿ ಪಾರ್ವತಮ ಹಾಗೂ ಪುತ್ರನನ್ನು ಅಗಲಿದ್ದಾರೆ.ಇಂದು ಅವರ ಮೃತದೇಹವನ್ನು ತಾಳೆಕೆರೆಗೆ ಕೊಂಡೊಯ್ದು ಗುಡ್ಡೆ ರಂಗನಾಥಸ್ವಾಮಿ ಗುಡಿ ರಸ್ತೆಯಲ್ಲಿರುವ ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು.

ಕಸ್ತೂರಿ ಟಿವಿ ಮೂಲಕ ಕಸ್ತೂರಿ ಗಣೇಶ್‌ ಎಂದು ಪರಿಚಿತರಾಗಿದ್ದ ಗಣೇಶ್‌ ಅವರ ಕ್ರೈಂ ವರದಿಗಾರಿಕೆಯಲ್ಲಿ ನಿಪುಣರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಇಂದು ಹಲವಾರು ಯುವ ಪತ್ರಕರ್ತರು ಯಶಸ್ವಿ ಪತ್ರಕರ್ತರಾಗಿ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕಸ್ತೂರಿ, ನ್ಯೂಸ್‌‍ 18, ಪ್ರಜಾ ಟಿವಿಗಳಲ್ಲಿ ಸೇವೆ ಸಲ್ಲಿಸಿದ್ದ ಗಣೇಶ್‌ ಅವರು ಪ್ರಸ್ತುತ ಟಿವಿ 5 ನಲ್ಲಿ ಇನ್‌ಪುಟ್‌ ಚೀಫ್‌ ಅಗಿ ಸೇವೆ ಸಲ್ಲಿಸುತ್ತಿದ್ದರು. ಗಣೇಶ್‌ ಅವರ ನಿಧನಕ್ಕೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಪ್ರೆಸ್‌‍ ಕ್ಲಬ್‌, ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ವರದಿಗಾರರ ಕೂಟ ಕಂಬನಿ ಮಿಡಿದಿದೆ. ಅದೇ ರೀತಿ ಹಲವಾರು ಗಣ್ಯರು, ಹಿರಿಯ ಪೊಲೀಸ್‌‍ ಅಧಿಕಾರಿಗಳು ಗಣೇಶ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!