
ಉಳ್ಳಾಲ: ಮಟ ಮಟ ಮಧ್ಯಾಹ್ನದ ವೇಳೆ ನಿಯಂತ್ರಣ ತಪ್ಪಿದ ಆಕ್ಟಿವಾ ಸ್ಕೂಟರ್ ರಸ್ತೆ ಅಂಚಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರು ಶಾರದಾ ನಗರ ಎಂಬಲ್ಲಿ ಬುಧವಾರ ನಡೆದಿದೆ.
ಮಾಡೂರು ಶಿವಾಜಿನಗರದ ನಿವಾಸಿ ನಾಗೇಶ್(50) ಮೃತಪಟ್ಟ ವ್ಯಕ್ತಿ. ಮೂಲತ: ಬಜಾಲ್ ಶಾಂತಿನಗರದ ನಾಗೇಶ್ ಅವರ ಕುಟುಂಬವು ಕಳೆದ ಮೂರು ವರುಷಗಳಿಂದ ಮಾಡೂರಿನಲ್ಲಿ ನೆಲೆಸಿದ್ದರು. ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಕಾಲೇಜಿನ ಬಸ್ಸು ಕಂಡಕ್ಟರ್ ಆಗಿ ನಾಗೇಶ್ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಕೆಲಸಕ್ಕೆ ರಜೆಯಿದ್ದ ಕಾರಣ ಬೀರಿ ಪೇಟೆಯಿಂದ ಸ್ಕೂಟರಲ್ಲಿ ತೆಂಗಿನ ಕಾಯಿಗಳನ್ನ ಖರೀದಿಸಿ ಮನೆಗೆ ತರುವ ಸಂದರ್ಭ ಸ್ಕೂಟರ್ ನಿಯಂತ್ರಣ ತಪ್ಪಿ ಮರಕ್ಕೆ ಬಡಿದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತ ನಾಗೇಶ್ ಮಾಡೂರಿನ ಅಯ್ಯಪ್ಪ ಭಜನಾ ಮಂದಿರದ ಸಕ್ರಿಯ ಸದಸ್ಯರಾಗಿದ್ದರು. ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
