ಪುತ್ತೂರು: ಪುತ್ತೂರು ತಾಲ್ಲೂಕಿನ ಗೆಜ್ಜೆಗಿರಿಯ ನಾಟಿ ವೈದ್ಯೆ ಲೀಲಾವತಿ ಪೂಜಾರಿ ಅವರು ರಾಜ್ಯ ಸರ್ಕಾರದ ಜಾನಪದ ಅಕಾಡೆಮಿ ನೀಡುವ 2023ನೇ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಲೀಲಾವತಿ ಪೂಜಾರಿ ಅವರು 55 ವರ್ಷಗಳಿಂದ ನಾಟಿ ವೈದ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

15ನೇ ವಯಸ್ಸಿನಲ್ಲಿಯೇ ನಾಟಿ ಔಷಧ ವಿದ್ಯೆ ಕಲಿತುಕೊಂಡಿದ್ದ ಲೀಲಾವತಿ ಪೂಜಾರಿ ಅವರು, 55 ವರ್ಷಗಳಲ್ಲಿ ಸಾವಿರಾರು ಮಂದಿಯ ರೋಗಗಳನ್ನು ಗಿಡಮೂಲಿಕೆ ಔಷಧಿಯ ಮೂಲಕ ಗುಣಪಡಿಸಿದ್ದಾರೆ. ಸರ್ಪಸುತ್ತು, ಕೆಂಪು, ಬೆಸುರ್ಪು, ದೃಷ್ಟಿ, ಸೋರಿಯಾಸಿಸ್ ಚರ್ಮರೋಗ, ಮಕ್ಕಳ ಚಿಕಿತ್ಸೆ, ಸಂಧಿವಾತ ಸಮಸ್ಯೆಗಳನ್ನು ನಾಟಿ ಔಷಧದ ಮೂಲಕ ಗುಣಪಡಿಸುತ್ತಿದ್ದಾರೆ.

ಪಾರಂಪರಿಕ ಮಂತ್ರ ವಿದ್ಯೆಯನ್ನು ಅರಿತಿರುವ ಲೀಲಾವತಿ ಅವರು ದೃಷ್ಟಿದೋಷ ನಿವಾರಣೆಗೆ ನೂಲು ಕಟ್ಟುವುದರಲ್ಲಿ ಮತ್ತು ಬೆಂಕಿ ಅವಘಡದಿಂದಾಗುವ ಉರಿ ತೆಗೆಯುವುದರಲ್ಲಿ ನಿಪುಣತೆ ಹೊಂದಿದ್ದಾರೆ. ಪುತ್ರ, ಗೆಜ್ಜೆಗಿರಿ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀಧರ ಪೂಜಾರಿ ಅವರ ಜತೆ ಸೇರಿಕೊಂಡು ಕೇಶ ತೈಲ, ನೋವಿನ ಎಣ್ಣೆ ತಯಾರಿಸುತ್ತಿದ್ದಾರೆ.

500 ವರ್ಷಗಳ ಹಿಂದೆ ಬಾಳಿ ಬದುಕಿದ್ದ ಐತಿಹಾಸಿಕ ಹಿನ್ನಲೆಯ ಕೋಟಿ-ಚೆನ್ನಯರ ತಾಯಿ ದೇಯಿ ಬೈದ್ಯೆತಿ ನಾಟಿ ವೈದ್ಯೆಯಾಗಿದ್ದರು. ಈ ನಾಟಿ ವೈದ್ಯಕೀಯ ಪರಂಪರೆ ಹೊಂದಿದ್ದ ಗೆಜ್ಜೆಗಿರಿಗೆ 65 ವರ್ಷಗಳ ಹಿಂದೆ ಸೊಸೆಯಾಗಿ ಬಂದ ಲೀಲಾವತಿ ಪೂಜಾರಿ ಅವರು, ಪತಿ ದಿ.ದೂಮಣ್ಣ ಪೂಜಾರಿ ಮತ್ತು ಅತ್ತೆ ದಿ.ಮದನು ಪೂಜಾರಿ ಅವರಿಂದ ನಾಟಿ ವೈದ್ಯ ವಿದ್ಯೆ ಕಲಿತುಕೊಂಡು, ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಗೆಜ್ಜೆಗಿರಿ ಕ್ಷೇತ್ರದ ಆದಿ ದೈವ ಧೂಮಾವತಿ ಮತ್ತು ಅಲ್ಲಿನ ಕಾರಣಿಕ ಮಾತೆ ದೇಯಿ ಬೈದ್ಯೆತಿಯ ಸ್ಮರಣೆಯಲ್ಲಿ ಅವರು ಔಷಧ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!