ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ ಮಾಡಿದ ಘಟನೆ ನ.23ರ ಶನಿವಾರ ಮಧ್ಯಾಹ್ನ ಸೋಮವಾರಪೇಟೆ ಪಟ್ಟಣದಲ್ಲಿ ನಡೆದಿದೆ.

ಪರಾರಿಯಾಗುವ ಸಂದರ್ಭ ಕಳ್ಳರು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು, ಪೊಲೀಸರ ಅತಿಥಿಯಾಗಿದ್ದಾರೆ.

ಪಟ್ಟಣದ ಸ್ವಾಮಿ ವಿವೇಕಾನಂದ ಸರ್ಕಲ್ ಬಳಿಯಿರುವ ಶ್ರೀಕುಮಾರಲಿಂಗೇಶ್ಚರ ಹಾರ್ಡ್ ವೇರ್ ಅಂಗಡಿಯಲ್ಲಿ ಮಾಲೀಕ ತೀರ್ಥ ಹರೀಶ್ ಒಬ್ಬರೆ ಕುಳಿತ್ತಿದ್ದ ಸಂದರ್ಭದಲ್ಲಿ ಖರೀದಿಯ ನೆಪದಲ್ಲಿ ಬಂದ ಮೂವರು ಕಳ್ಳರು, ಇದ್ದಕ್ಕಿದ್ದಂತೆ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಂಡಿದ್ದಾರೆ.

ಡ್ರಾವರ್‌ನಲ್ಲಿದ್ದ ಹಣ ಮತ್ತು ಚಿನ್ನದ ಸರವನ್ನು ತೆಗದುಕೊಂಡು ಸ್ಕೂಟಿಯಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ.

ಮಹಿಳೆಯ ಚೀರಾಟವನ್ನು ಗಮನಿಸಿದ ಅಕ್ಕಪಕ್ಕದ ವರ್ತಕರು, ಸ್ಕೂಟಿಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಸಫಾಲಿ ಬಾರ್ ಮುಂಭಾಗ ಒಬ್ಬ ಅರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸ್ ವಶದಲ್ಲಿರುವ ಆರೋಪಿ ಹಾಸನದ ಇಕ್ಬಾಲ್ ಎಂದು ತಿಳಿದು ಬಂದಿದೆ.

ಮತ್ತೊಬ್ಬ ಆರೋಪಿ ಸನಬ್ ಎಂಬಾತ ಬಸ್‌ನಲ್ಲಿ ಹಾಸನಕ್ಕೆ ತೆರಳುತ್ತಿದ್ದ ಸಂದರ್ಭ ಶನಿವಾರ ಸಂತೆ ಬಳಿ ಸಿಕ್ಕಿಬಿದ್ದಿದ್ದಾನೆ. ಇಬ್ರಾಹಿಂ ಎಂಬವನು ತಲೆಮರೆಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಒಂದು ಚಿನ್ನದ ಸರ ಮತ್ತು 23,700 ರೂ. ಹಣವನ್ನು ಇಕ್ಬಾಲ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!