
ಗ್ರಾಹಕರೊಬ್ಬರ ನಿಶ್ಚಿತ ಠೇವಣಿಯಿಂದ 3 ಕೋಟಿ ರೂ. ಲಪಟಾಯಿಸಿದ ಆರೋಪದ ಮೇಲೆ HDFC ಬ್ಯಾಂಕ್ ಉದ್ಯೋಗಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಿಗೇ, HDFC ಬ್ಯಾಂಕ್ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಬಾಂಬೆ ಹೈಕೋರ್ಟ್ 3 ನೋಟಿಸ್ ಗಳನ್ನು ಜಾರಿಗೊಳಿಸಿದೆ ಎಂದು ವರದಿಯಾಗಿದೆ.
ಜನರಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಹೇಗೆ ವಿಶ್ವಾಸ ಉಳಿಯಲು ಸಾಧ್ಯ?” ಎಂದು ನ್ಯಾ ರೇವತಿ ಮೋಹಿತೆ ಡೇರೆ ಹಾಗೂ ನ್ಯಾ. ಪೃಥ್ವಿರಾಜ್ ಚವಾಣ್ ಅವರನ್ನೊಳಗೊಂಡಿದ್ದ ನ್ಯಾಯಪೀಠ ಪ್ರಶ್ನಿಸಿತು.
ಸಂಪರ್ಕ ವ್ಯವಸ್ಥಾಪಕಿ ಪಾಯಲ್ ಕೊಠಾರಿ (27) ಎಂಬವರು ನನ್ನ 3 ಕೋಟಿ ರೂ. ಮೌಲ್ಯದ ನಿಶ್ಚಿತ ಠೇವಣಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಆ ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಿದ್ದಾರೆ. ನಂತರ ಆ ಹಣ ಪಾಯಲ್ ಕೊಠಾರಿಯ ಖಾತೆಗೆ ಜಮೆಯಾಗಿದೆ ಎಂದು ಮೀನಾಕ್ಷಿ ಕಪೂರಿಯ (53) ಎಂಬ ಗ್ರಾಹಕರು ದೂರು ಸಲ್ಲಿಸಿದ್ದರು. ಈ ವಹಿವಾಟುಗಳ ಬಗ್ಗೆ ನನಗೆ ಯಾವುದೇ ಎಸ್ಎಂಎಸ್ ಅಥವಾ ಇಮೇಲ್ ಬಂದಿಲ್ಲ ಎಂದೂ ಅವರು ಆರೋಪಿಸಿದ್ದರು.
ಸೋಮವಾರ ಕಪೂರಿಯ ಪರ ವಾದಿಸಿದ ವಕೀಲ ರಿಝ್ವಾನ್ ಸಿದ್ದೀಕಿ, ಕಪೂರಿಯರ ವಿಶ್ವಾಸ ಗಳಿಸಿದ ಕೊಠಾರಿ, ಕೆಲವು ಖಾಲಿ ಚೆಕ್ ಗಳ ಮೇಲೆ ಅವರ ಸಹಿ ಪಡೆದುಕೊಂಡಿದ್ದರು. ನಿಶ್ಚಿತ ಠೇವಣಿಗಿಂತ ಹೆಚ್ಚು ಲಾಭ ತರುವ ಮ್ಯೂಚುಯಲ್ ಫಂಡ್ಸ್, ಚಿನ್ನದ ಬಾಂಡ್ ಗಳು ಹಾಗೂ ಇನ್ನಿತರ ಯೋಜನೆಗಳಲ್ಲಿ ಆ ಹಣವನ್ನು ಹೂಡಿಕೆ ಮಾಡಲಾಗುವುದು
ಎಂದು ಕಪೂರಿಯಗೆ ಕೊಠಾರಿ ಭರವಸೆ ನೀಡಿದ್ದರು ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಅಲ್ಲದೆ, ಈ ವಿಷಯವನ್ನು ಕೊಠಾರಿಯೊಂದಿಗೆ ಪರಿಹರಿಸಿಕೊಳ್ಳುವಂತೆ ಕಪೂರಿಯ ಮೇಲೆ ವೆರ್ಸೋವಾ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದೂ ಅವರು ಆರೋಪಿಸಿದರು.
ಕೊಠಾರಿಯ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರೂ, ಅವರ ಖಾತೆಯಲ್ಲಿ ಕೇವಲ 30,000 ರೂ. ಪತ್ತೆಯಾಗಿದೆ ಎಂದು ಪ್ರಾಸಿಕ್ಯೂಟರ್ ಕ್ರಾಂತಿ ಹಿವ್ರಾಲೆ ನ್ಯಾಯಾಲಯಕ್ಕೆ ತಿಳಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಯ ವೇಳೆ ಖುದ್ದಾಗಿ ಹಾಜರಾಗುವಂತೆ ವಿಭಾಗೀಯ ಉಪ ಪೊಲೀಸ್ ಆಯುಕ್ತ ದೀಕ್ಷಿತ್ ಗೆಡಂ ಅವರಿಗೆ ಆದೇಶಿಸಿತು.






