
ದಕ್ಷಿಣ ಕೊರಿಯಾದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಭೀಕರ ವಿಮಾನ ಅಪಘಾತದಲ್ಲಿ 179 ಜನ ಸಾವನ್ನಪ್ಪಿದ್ದಾರೆ. 181 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಅಪಘಾತದಿಂದ ಹೊತ್ತಿ ಉರಿದಿದೆ. 179 ಜನ ಮೃತಪಟ್ಟಿದ್ದು ಇಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ ನೋವು, ಚೀರಾಟಗಳು ಎಂತಹವರಲ್ಲೂ ಕಣ್ಣಿರು ತರಿಸುವಂತಿತ್ತು. ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಟುಂಬದ ಸದಸ್ಯರು ತಮ್ಮವರ ಮೃತದೇಹಗಳಿಗಾಗಿ ಹುಡುಕಾಡುತ್ತಿದ್ದರು.
ಭೀಕರ ಅಪಘಾತಕ್ಕೆ ಹಲವು ಕಾರಣಗಳನ್ನು ನೀಡಲಾಗಿದೆ. ವಿಮಾನದ ರೆಕ್ಕೆಗೆ ಹಕ್ಕಿಯೊಂದು ಸಿಲುಕಿಕೊಂಡಿದೆ ಎಂದು ಅಪಘಾತವಾಗುವ ಕೆಲವೇ ನಿಮಿಷಗಳ ಮೊದಲು ವಿಮಾನದಲ್ಲಿದ್ದ ವ್ಯಕ್ತಿಯೊಬ್ಬ ಸಂದೇಶ ಕಳಿಸಿದ್ದಾರೆ ಎಂದು ವರದಿಯಾಗಿದೆ. ಬಳಿಕ ಮತ್ತೊಂದು ಸಂದೇಶ ಬಂದಿದ್ದು, ನಾನು ನನ್ನ ಕೊನೆಯ ಮಾತುಗಳನ್ನು ಹೇಳಲೇ? ಎಂದು ಕೇಳಲಾಗಿತ್ತು.
ಆಗಲೇ ಆ ಪ್ರಯಾಣಿಕನಿಗೆ ತಾನು ಇನ್ನು ಬದುಕುವುದಿಲ್ಲ ಎನ್ನುವುದು ಖಚಿತವಾದಂತಿತ್ತು. ತನ್ನ ಪ್ರೀತಿ ಪಾತ್ರರಿಗೆ ಕೊನೆಯ ಮಾತು ಹೇಳಲು ಆತ ಎಷ್ಟು ಪರಿತಪಿಸಿದ್ದ ಎನ್ನುವುದು ಆ ಸಂದೇಶದಲ್ಲಿ ತಿಳಿಯುತ್ತದೆ. ಈ ಸಂದೇಶಗಳು ನೆರೆದಿದ್ದವರ ದುಃಖವನ್ನು ಮತ್ತಷ್ಟು ಹೆಚ್ಚಿಸಿದವು. ದಕ್ಷಿಣ ಕೊರಿಯಾದ ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದ ಪ್ರಕಾರ,ಅನೇಕ ಸ್ಥಳೀಯರು ಜೆಟ್ನ ಎಂಜಿನ್ನಲ್ಲಿ ಬೆಂಕಿಯನ್ನು ನೋಡಿದ್ದಾರೆ. ಅಪಘಾತದ ಸಮಯದಲ್ಲಿ ಸ್ಫೋಟದ ಸದ್ದು ಕೇಳಿದ್ದಾರೆ ಎಂದು ತಿಳಿಸಿದೆ.
“ವಿಮಾನ ಕೆಳಗಿಳಿಯುತ್ತಿರುವನ್ನು ನಾನು ನೋಡಿದೆ, ಮೊದಲು ಅದು ಇಳಿಯುತ್ತಿರುವಂತೆ ಕಂಡಿತು ಆದರೆ ನಂತರ ಗಾಳಿಯಲ್ಲಿ ಹೊಗೆಯ ಜೊತೆ ಸ್ಫೋಟಗೊಂಡಿತು, ಹಲವು ಬಾರಿ ಸ್ಫೋಟಗೊಂಡ ಶಬ್ದವನ್ನು ಕೇಳಿದೆವು” ಎಂದು ವಿಮಾನ ನಿಲ್ದಾಣದಿಂದ 4 ಕಿಲೋ ಮೀಟರ್ ದೂರದಲ್ಲಿರುವ ವ್ಯಕ್ತಿಯೊಬ್ಬ ತಾನು ನೋಡಿದ ದೃಶ್ಯಗಳ ಬಗ್ಗೆ ವಿವರಿಸಿದ್ದಾನೆ.ಮತ್ತೊಬ್ಬ ವ್ಯಕ್ತಿ ಕೂಡ ತಾನು ಎರಡು ಬಾರಿ ಸ್ಫೋಟದ ಶಬ್ದವನ್ನು ಕೇಳಿದ್ದಾಗಿ ಹೇಳಿದ್ದಾರೆ. ಲ್ಯಾಂಡಿಂಗ್ ಮಾಡಲು ವಿಫಲವಾದ ಬಳಿಕ ವಿಮಾನ ಮತ್ತೆ ಮೇಲೆ ಹಾರಲು ಪ್ರಯತ್ನಿಸಿತ್ತು, ಬಳಿಕ ಆಕಾಶದಲ್ಲಿ ದೊಡ್ಡದಾಗಿ ಸ್ಫೋಟಗೊಂಡಿದ್ದು ಕಪ್ಪು ಹೊಗೆಯನ್ನು ನೋಡಿದೆ, ಕೆಲವೇ ಸೆಕೆಂಡ್ಗಳಲ್ಲಿ ಎಲ್ಲವೂ ಮುಗಿದುಹೋಯಿತು ಎಂದು ಹೇಳಿದ್ದಾನೆ.
ಜೆಜು ಏರ್ ಸಂಸ್ಥೆಗೆ ಸೇರಿದ ಬೋಯಿಂಗ್ 737-800 ವಿಮಾನವು ಬ್ಯಾಂಕಾಕ್ನಿಂದ ಮುವಾನ್ಗೆ ತೆರಳುತ್ತಿತ್ತು. ಬೆಳಿಗ್ಗೆ 9 ಗಂಟೆ ವೇಳೆಗೆ ಲ್ಯಾಂಡ್ ಮಾಡಲು ಪ್ರಯತ್ನಿಸಿತು. ಆದರೆ ಅದು ವಿಮಾನ ನಿಲ್ದಾಣದ ಬೇಲಿಗೆ ಅಪ್ಪಳಿಸಿತು. ತಕ್ಷಣವೇ ಬೆಂಕಿ ಹತ್ತಿಕೊಂಡಿದ್ದು ದೊಡ್ಡ ಸ್ಫೋಟ ಸಂಭವಿಸಿದೆ.
ತನಿಖಾಧಿಕಾರಿಗಳ ಪ್ರಕಾರ ಪಕ್ಷಿಗಳ ದಾಳಿ ಮತ್ತು ಹವಾಮಾನ ಪರಿಸ್ಥಿತಿಯೇ ದುರಂತಕ್ಕೆ ಕಾರಣ ಎಂದು ಹೇಳಿದ್ದಾರೆ, ಇದು ಪ್ರಾಥಮಿಕ ಮಾಹಿತಿಯಾಗಿದ್ದು ತನಿಖೆಯ ಬಳಿಕವೇ ನಿಖರ ಮಾಹಿತಿ ಸಿಗಲಿದೆ. ಅಪಘಾತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಜು ಏರ್ ಮೃತಪಟ್ಟ ಪ್ರಯಾಣಿಕರ ಬಳಿ ಕ್ಷಮೆಯಾಚಿಸಿದೆ.






