ತಾನು ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಯುವಕ ಸತೀಶ್ ಕುಮಾರ್(25) ಎಂದು ಗುರುತಿಸಲಾಗಿದ್ದು, ಈ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ಬೆಳ್ಳಂದೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್, ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿ ಸಹ ಸತೀಶ್ನ ಲವ್ ಪ್ರಪೋಸ್ಗೆ ಒಪ್ಪಿಗೆ ನೀಡಿದ್ದಳು. ಹೀಗೆ ಪರಸ್ಪರ ಕಳೆದ ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಆದ್ರೆ, ಈ ವಿಚಾರ ಮನೆಯವರಿಗೆ ಗೊತ್ತಾಗಿ ಇಬ್ಬರ ಪ್ರೀತಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಮನನೊಂದು ಸತೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನಲ್ಲಿ ಕಾಲೇಜು ಓದುತ್ತಿದ್ದ ವೇಳೆ ಯುವಕ ಸತೀಶ್ ಕುಮಾರ್, ಯುವತಿಯನ್ನು ಪ್ರೀತಿಸುತ್ತಿದ್ದನು. ಆಗ ಯುವತಿಯೂ ಈತನನ್ನು ಪ್ರೀತಿ ಮಾಡುತ್ತಿದ್ದಳು. ಇದರಿಂದಾಗಿ ಕಾಲೇಜು ಕ್ಲಾಸಿಗೆ ಬಂಕ್ ಮಾಡಿ ಪಾರ್ಕ್, ಶಾಪಿಂಗ್ ಮಾಲ್, ಸಿನಿಮಾ, ದೇವಸ್ಥಾನ ಎಂದೆಲ್ಲಾ ವಿವಿಧೆಡೆ ಜಂಟಿಯಾಗಿ ಸುತ್ತಾಡಿದ್ದಾರೆ. ಇದಾದ ನಂತರ ಯುವಕ ತನ್ನ ಪ್ರೀತಿ ಉಳಿಸಿಕೊಳ್ಳಬೇಕು ಎಂದು ಓದು ಮುಗಿದ ಕೂಡಲೇ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಆದರೆ, ಇವರ ಪ್ರೀತಿ ಯುವತಿ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಈ ಸಂಬಂಧ 4 ತಿಂಗಳ ಹಿಂದೆ ಯುವತಿ ಕುಟುಂಬಸ್ಥರು ಸತೀಶ್ ವಿರುದ್ಧ ಕಿರುಕುಳ ಆರೋಪದ ಮೇಲೆ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬಳಿಕ ಪೊಲೀಸರು ಸತೀಶ್ನನ್ನು ಠಾಣೆಗೆ ಕರೆಯಿಸಿ ಬುದ್ಧಿವಾದ ಹೇಳಿದ್ದರು. ಆ ಬಳಿಕ ಕೆಲ ಕಾಲ ಯುವತಿಯಿಂದ ದೂರವಿದ್ದು, ಹೊಸ ವರ್ಷಕ್ಕೆ ಹೊಸ ಜೀವನ ಮಾಡಲು ನಿರ್ಧರಿಸಿದ್ದ. ಆದ್ರೆ, ಹೊಸ ವರ್ಷದಂದು ಯುವತಿಗೆ ಕರೆ ಮಾಡಿ ಮತ್ತೆ ಒಂದಾಗುವಂತೆ ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಕ್ಕೆ ಮನನೊಂದು ಆತ್ಮಹತ್ಯೆ ಶರಣಾಗಿದ್ದಾನೆ.

ಲವ್ ಫೇಲ್ಯೂರ್‌ನಿಂದ ಕೆಲವು ದಿನಗಳಿಂದ ಮನನೊಂದಿದ್ದ ಸತೀಶ್ ಕುಮಾರ್ ಯುವತಿಯನ್ನು ಮರು ಮನವೊಲಿಸಲು ತುಂಬಾ ಪ್ರಯತ್ನ ಮಾಡಿದ್ದಾನೆ. ಇಷ್ಟಾಗಿಯೂ ಯುವತಿ ಈತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಸತೀಶ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಈ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕೂಸಲೇ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ ಪೊಲೀಸರು, ನಂತರ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆ ಶವಾಗಾರಕ್ಕೆ ಶಿಫ್ಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!