
ಪುತ್ತೂರು; ಗೃಹಿಣಿಯೊಬ್ಬರ ಮೇಲೆ ಆಕೆಯ ಪತಿ ಹಾಗೂ ಇತರ ಮೂವರು ಸೇರಿಕೊಂಡು ಹಲ್ಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಪ್ರಕರಣ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕೊಡಿಪ್ಪಾಡಿಯ ಎಚ್.ಅಮೀನಾ ಅವರು ಈ ಬಗ್ಗೆ ದೂರು ನೀಡಿದ್ದು, ತನ್ನ ಪತಿ ಕೆ.ಎಂ. ಅಬ್ದುಲ್ಲಾ, ಝಾರಾ, ಗಝಾಲಿ ಹಾಗೂ ರೈಸ ಎಂಬವರು ಹಲ್ಲೆ ನಡೆಸಿದ್ದಾರೆ. ಅಕ್ರಮವಾಗಿ ತನ್ನ ಮನೆಗೆ ಪ್ರವೇಶಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಮನೆಯ ಸಾಮಾನುಗಳನ್ನು ಬೀಸಾಡಿದ್ದಾರೆ. ಮನೆಯಿಂದ ಹೊರಗೆ ಹೋಗುವಂತೆ ಬೆದರಿಕೆ ಹಾಕಿದ್ದಾರೆ. ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಕೆ.ಎಂ.ಅಬ್ದುಲ್ಲಾ ಎಂಬವರನ್ನು ೨೦೧೯ರಲ್ಲಿ ತಾನು ವಿವಾಹವಾಗಿದ್ದು, ನಮಗೆ ಮಕ್ಕಳಿಲ್ಲ. ಆದರೆ ಅದಕ್ಕೆ ಮೊದಲೇ ತನ್ನ ಪತಿ ಕೆ.ಎಂ. ಅಬ್ದುಲ್ಲಾ ಅವರು ಝಾರಾ ಎಂಬಾಕೆಯನ್ನು ವಿವಾಹವಾಗಿದ್ದರು. ಇದನ್ನು ನನ್ನ ಮದುವೆ ಸಮಯದಲ್ಲಿ ನನ್ನಿಂದ ಮರೆಮಾಚಿದ್ದರು. ಫೆ.೧೯ರಂದು ಕೊಡಿಪ್ಪಾಡಿಯ ನಾನು ವಾಸಿಸುತ್ತಿರುವ ನನ್ನ ಮನೆಗೆ ಬಂದ ಈ ನಾಲ್ವರು ಅನುಚಿತವಾಗಿ ನಡೆದುಕೊಂಡಿದ್ದಾರೆ. ನನ್ನ ಪತಿ ಮತ್ತು ರೈಸ ಎಂಬಾತ ನನಗೆ ಕಾಲಿನಿಂದು ತುಳಿದಿದ್ದಾರೆ. ಗಝಾಲಿ ಎಂಬಾತ ನನ್ನ ನೈಟಿಯನ್ನು ಎಳೆದು ಅಪಮಾನ ಮಾಡಿದ್ದಾನೆ. ಈ ಸಂದರ್ಭ ಝಾರಾ ಎಂಬಾಕೆ ನನ್ನನ್ನು ಕೊಲ್ಲುವಂತೆ ಪ್ರೇರಣೆ ನೀಡಿದ್ದಾಳೆ.
ಇದೀಗ ನನಗೆ ಬದುಕುವುದೇ ಕಷ್ಟವಾಗುತ್ತಿದೆ. ಯಾವಾಗ ಬಂದು ನನ್ನ ಮೇಲೆ ಹಲ್ಲೆ ಮಾಡುತ್ತಾರೆಯೋ ನನ್ನನ್ನು ಕೊಲೆ ಮಾಡುತ್ತಾರೆಯೋ ಎಂಬ ಭಯ ಕಾಡುತ್ತಿದೆ. ಆದ್ದರಿಂದ ನನ್ನ ಪತಿ ಕೆ.ಎಂ.ಅಬ್ದುಲ್ಲಾ ಹಾಗೂ ಇತರ ಮೂವರ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕು. ಅವರಿಂದ ನನಗಿರುವ ಜೀವಭಯ ಹೋಗಲಾಡಿಸಬೇಕು ಎಂದು ಅಮೀನಾ ಅವರು ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
