ಪಂಜಾಬ್‌ನ ಅಮೃತಸರದ ಠಾಕೂರ್ದ್ವಾರ ದೇವಸ್ಥಾನದಲ್ಲಿ ನಡೆದ ಗ್ರೆನೇಡ್ ದಾಳಿಯ ಆರೋಪಿಯೊಬ್ಬ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಮೃತನನ್ನು ಅಮೃತಸರದ ಬಾಲ್ ಗ್ರಾಮದ ನಿವಾಸಿ ಜಗಜಿತ್ ಸಿಂಗ್ ಅವರ ಪುತ್ರ ಗುರ್ಸಿದಕ್ ಎಂದು ಗುರುತಿಸಲಾಗಿದೆ.

ಎರಡನೇ ಆರೋಪಿ ರಾಜು ಅವರ ಪುತ್ರ ಮತ್ತು ಅಮೃತಸರದ ರಾಜಸಾನ್ಸಿ ನಿವಾಸಿ ವಿಶಾಲ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಸೋಮವಾರ ಬೆಳಗ್ಗೆ ಜಿಲ್ಲೆಯ ರಾಜಸಾನ್ಸಿ ಪ್ರದೇಶದ ಅಮೃತಸರದಲ್ಲಿ ಗ್ರೆನೇಡ್ ದಾಳಿ ನಡೆಸಿದ ಇಬ್ಬರು ಆರೋಪಿಗಳ ಚಲನವಲನದ ಬಗ್ಗೆ ಪಂಜಾಬ್ ಪೊಲೀಸರಿಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಸಿಕ್ಕಿತು. ಮಾಹಿತಿಯ ಮೇರೆಗೆ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದೆ. ಛೆಹರ್ತಾದ ಸ್ಟೇಷನ್ ಹೆಡ್ ಆಫೀಸರ್ (SHO) ಮೋಟಾರ್ ಸೈಕಲ್‌ನಲ್ಲಿದ್ದ ಆರೋಪಿಗಳನ್ನು ತಡೆಯಲು ಪ್ರಯತ್ನಿಸಿದಾಗ, ಅವರು ವಾಹನವನ್ನು ಬಿಟ್ಟು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಹೆಡ್ ಕಾನ್ಸ್ಟೇಬಲ್ ಗುರುಪ್ರೀತ್ ಸಿಂಗ್ ಗಾಯಗೊಂಡಿದ್ದು, ಇನ್ನೊಂದು ಗುಂಡು ಇನ್ಸ್ ಪೆಕ್ಟರ್ ಅಮೋಲಕ್ ಸಿಂಗ್ ಅವರ ಪೇಟಕ್ಕೆ ತಗುಲಿದೆ.

ಈ ವೇಳೆ ಆತ್ಮರಕ್ಷಣೆಯ ಸಲುವಾಗಿ ಇನ್ಸ್ ಪೆಕ್ಟರ್ ವಿನೋದ್ ಕುಮಾರ್ ಗುಂಡು ಹಾರಿಸಿ ಒಬ್ಬನನ್ನು ಗಾಯಗೊಳಿಸಿದ್ದಾರೆ. ಆದರೆ ಇತರ ಆರೋಪಿಗಳು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡ ಕಾನ್ಸ್ಟೇಬಲ್ ಗಳು ಮತ್ತು ಆರೋಪಿಯನ್ನು ತಕ್ಷಣ ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಲ್ಲಿ ಆರೋಪಿ ಗುರುಸಿದಕ್ ಸಾವನ್ನಪ್ಪಿದ್ದಾನೆ. ಘಟನೆಯ ಕುರಿತು ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ.

ಮಾರ್ಚ್ 14 ರ ರಾತ್ರಿ ಅಮೃತಸರದ ಖಾಂಡ್ವಾಲಾದ ಠಾಕೂರ್ದ್ವಾರ ದೇವಸ್ಥಾನದಲ್ಲಿ ಗ್ರೆನೇಡ್ ದಾಳಿ ನಡೆದಿತ್ತು. ಘಟನೆಯ ನಂತರ ವಿಧಿವಿಜ್ಞಾನ ತಂಡವು ತನಿಖೆ ನಡೆಸಿದ್ದಾರೆ. ಸ್ಥಳೀಯ ಸಿಸಿಟಿವಿ ದೃಶ್ಯದಲ್ಲಿ ಮಧ್ಯರಾತ್ರಿಯ ವೇಳೆ ಸೈಕಲ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಸ್ಫೋಟಕ ಎಂದು ಶಂಕಿಸಲಾದ ವಸ್ತುವನ್ನು ಎಸೆದು ಹೋಗಿರುವುದು ಕಂಡುಬಂದಿದೆ. ಸದ್ಯ ಸ್ಫೋಟದ ಸಂದರ್ಭ ಯಾರಿಗೂ ಗಾಯಗಳಾಗಿಲ್ಲ

Leave a Reply

Your email address will not be published. Required fields are marked *

Join WhatsApp Group
error: Content is protected !!