
ಹರೇಕಳ ಖಂಡಿಗ ಹಳೆ ಪಂಚಾಯತ್ ಬಳಿ ಶನಿವಾರ ತಡರಾತ್ರಿ ಸ್ಕೂಟರ್ಗೆ ಕಾಡು ಹಂದಿ ಢಿಕ್ಕಿ ಹೊಡೆದು ನಡೆದ ಅಪಘಾತದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಕೊಲ್ಕೆ ಮೇಗಿನ ಮನೆ ನಿವಾಸಿ ದೇವಕಿ (72) ಅವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಬಜಾಲ್ನಲ್ಲಿ ಮನೆಯೊಳಗೆ ಏಣಿಯಿಂದ ಬಿದ್ದು ಗಾಯಗೊಂಡಿದ್ದ ಸಹೋದರನನ್ನು ನೋಡಲು ದೇವಕಿ ಅವರು ಪುತ್ರ ವರದರಾಜ್ ಜತೆಗೆ ಶನಿವಾರ ಸಂಜೆ ತೆರಳಿದ್ದರು. ರಾತ್ರಿ ಊಟ ಮಾಡಿದ ಬಳಿಕ ಅಡ್ಯಾರ್ ಮಾರ್ಗವಾಗಿ ಹರೇಕಳದ ತನ್ನ ಮನೆಗೆ ಮರಳುತ್ತಿದ್ದಾಗ ಹರೇಕಳ ಖಂಡಿಗ ಬಳಿ ದಿಢೀರ್ ಆಗಿ ಕಾಡುಹಂದಿ ಅಡ್ಡ ಬಂದು ಸ್ಕೂಟರ್ಗೆ ಢಿಕ್ಕಿ ಹೊಡೆದಿದೆ.
ಆಯಂಬುಲೆನ್ಸ್ಗೆ ಬೈಕ್ ಢಿಕ್ಕಿ: ಇಬ್ಬರು ಗಂಭೀರ
ಅಪಘಾತದಲ್ಲಿ ಮೃತಪಟ್ಟಿದ್ದ ದೇವಕಿ ಅವರ ಮೃತದೇಹವನ್ನು ಹರೇಕಳ ಕೊಳ್ಕೆ ಅವರ ಮನೆಗೆ ಸಾಗಿಸಿ ದೇರಳಕಟ್ಟೆ ಕಡೆಗೆ ಮರಳುತ್ತಿದ್ದ ಆಯಂಬುಲೆನ್ಸ್ಗೆ ಹರೇಕಳ ಬಾವಲಿಗುರಿ ಹೊಸ ಪಂಚಾಯತ್ ಕಟ್ಟಡ ಬಳಿ ಬೈಕ್ ಢಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಹರೇಕಳ ಕಡೆ ಸಾಗುತ್ತಿದ್ದ ಇನ್ನೊಂದು ಆಯಂಬುಲೆನ್ಸ್ ಅನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ದೇರಳಕಟ್ಟೆ ಸಾಗುತ್ತಿದ್ದ ಆಯಂಬುಲೆನ್ಸ್ಗೆ ಬೈಕ್ ನೇರವಾಗಿ ಢಿಕ್ಕಿ ಹೊಡೆದಿದ್ದು, ಈ ದೃಶ್ಯ ಹರೇಕಳ ಪಂಚಾಯುತ್ನ ಸಿಸಿಟಿವಿಯಲ್ಲಿ ದಾಖಲಾಗಿದೆ. ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ






