
ರಿವರ್ ರಾಫ್ಟಿಂಗ್ ವೇಳೆ ನೀರಿಗೆ ಬಿದ್ದು ಯುವಕನೊಬ್ಬ ಪ್ರಾಣಬಿಟ್ಟ ಘಟನೆ ಉತ್ತರಾಖಂಡದ ರಿಷಿಕೇಶದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಸಾಗರ್ ನೇಗಿ ಎಂದು ಗುರುತಿಸಲಾಗಿದ್ದು, ಈತ ಡೆಹ್ರಾಡೂನ್ನಿಂದ ಪ್ರವಾಸಕ್ಕೆಂದು ಆಗಮಿಸಿದ್ದ ಎನ್ನಲಾಗಿದೆ.
ಇಲ್ಲಿನ ಶಿವಪುರಿಯಿಂದ ಪ್ರಾರಂಭವಾದ ರಿವರ್ ರಾಫ್ಟಿಂಗ್ನಲ್ಲಿ ಮಾರ್ಗಮಧ್ಯೆ ದೋಣಿಯಿಂದ ಸಾಗರ್ ನೇಗಿ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ. ನೀರಿನ ರಭಸ ಹೆಚ್ಚಿದ ಕಾರಣ ಆತ ಮತ್ತೆ ದೋಣಿ ಹತ್ತುವಲ್ಲಿ ವಿಫಲನಾಗಿದ್ದಾನೆ. ದೋಣಿಯಲ್ಲಿದ್ದ ಜನರು ಕೂಡ ಆತನನ್ನು ಕಾಪಾಡಲು ಸಾಧ್ಯವಾಗಲಿಲ್ಲ. ನೋಡು ನೋಡುತ್ತಿದ್ದಂತೆಯೇ ಸಾಗರ್ ನೇಗಿ ನೀರಿನಲ್ಲಿ ಮುಳುಗಿ ತನ್ನ ಪ್ರಾಣವನ್ನು ಬಿಟ್ಟಿದ್ದಾನೆ.
ದುರ್ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಘಟನೆಯಾದ ಕೆಲವು ಗಂಟೆಗಳ ಬಳಿಕ ಸಾಗರ್ ಅವರ ಮೃತದೇಹವನ್ನು ರಕ್ಷಣಾ ತಂಡ ಗಂಗಾನದಿಯಿಂದ ಹೊರ ತರುವುದರಲ್ಲಿ ಯಶಸ್ವಿಯಾಗಿದೆ.
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಯ ಬಗ್ಗೆ ತಪೋವನ್ ಹೊರಠಾಣೆ ಉಸ್ತುವಾರಿ ಪ್ರದೀಪ್ ರಾವತ್ ಮಾತನಾಡಿ ತನಿಖೆಗೆ ಬೇಕಾದ ಅಗತ್ಯಮಾಹಿತಿ ಕಲೆ ಹಾಕಲಾಗಿದೆ ಎಂದಿದ್ದಾರೆ. ಇದರ ನಡುವೆ ರಿವರ್ ರಾಫ್ಟಿಂಗ್ ಸಮಯದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಪ್ರವಾಸಿರಿಗೆ ಸೂಚನೆ ನೀಡಲಾಗಿದೆ.









