ಇಲ್ಲಿನ ಹಳೇ ಬಸ್‌ ನಿಲ್ದಾಣದ ಬಳಿಯ ಚಿನ್ನಾಭರಣ ಮಳಿಗೆಯೊಂದಕ್ಕೆ ಎಪ್ರಿಲ್ 17ರಂದು ಗ್ರಾಹಕಿಯ ಸೋಗಿನಲ್ಲಿ ಬಂದು ಒಟ್ಟು 72 ಗ್ರಾಂ ತೂಕದ 4.80 ಲಕ್ಷ ರೂ. ಮೌಲ್ಯದ ಚಿನ್ನಾ ಭರಣವನ್ನು ಎಗರಿಸಿದ್ದ  ಮಹಿಳೆಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ

ಇಲ್ಲಿನ ಹಸನ್‌ ಟವರ್ಸ್‌ನಲ್ಲಿರುವ ದಿನಾರ್‌ ಗೋಲ್ಡ್‌ ಆಯಂಡ್‌ ಡೈಮಂಡ್ಸ್‌ ಮಳಿಗೆಗೆ ಎ. 17ರ ಗುರುವಾರ ಮಧ್ಯಾಹ್ನ 2.30ಕ್ಕೆ ಬಂದ  ಮಹಿಳೆ ಮದುವೆ ಕಾರ್ಯಕ್ರಮಕ್ಕೆ 30 ಗ್ರಾಂ ಚಿನಾಭರಣ ಬೇಕಾಗಿದೆ. ನನ್ನ ಮನೆಯವರು ನಾಳೆ ಬಂದು ಹಣಕೊಟ್ಟು ಚಿನ್ನಾಭರಣ ತೆಗೆದುಕೊಳ್ಳುತ್ತಾರೆ. ನಾನೀಗ ಚಿನ್ನಾಭರಣವನ್ನು ಆಯ್ಕೆ ಮಾಡಿ ಹೋಗುತ್ತೇನೆ ಎಂದು ತಿಳಿಸಿದ್ದರು.

ಅಲ್ಲಿನ ಸಿಬಂದಿ ಬೇರೆ ಬೇರೆ ನಮೂನೆಯ ಚಿನ್ನಾಭರಣವನ್ನು ತೋರಿಸಿದ್ದರು. ಅವುಗಳಲ್ಲಿ ಕೆಲವೊಂದನ್ನು ಆಯ್ಕೆ ಮಾಡಿ, ನಾಳೆ ನನ್ನ ಮನೆಯವರು ಬಂದು ಹಣಕೊಟ್ಟು ಈ ಎಲ್ಲ ಆಭರಣಗಳನ್ನು ಖರೀದಿಸುತ್ತಾರೆ ಎಂದು ತಿಳಿಸಿ ಹೋಗಿದ್ದರು. ರಾತ್ರಿ ಎಂದಿನಂತೆ ಚಿನ್ನಾಭರಣದ ದಾಸ್ತಾನು ಪರಿಶೀಲನೆ ವೇಳೆ ಕೊರತೆ ಕಂಡು ಬಂದಿತ್ತು. ಸಿಸಿ ಕೆಮರಾ ಪರಿಶೀಲಿಸಿದಾಗ 24 ಗ್ರಾಂ ತೂಕದ ಚಿನ್ನದ ಕಾಲು ಚೈನ್‌ 2 ಜೊತೆ, 8 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೆಟ್‌, 16 ಗ್ರಾಂ ತೂಕದ ಚಿನ್ನದ ಸರ ಸಹಿತ 72 ಗ್ರಾಮ್‌ ತೂಕದ 4.80 ಲಕ್ಷ ರೂ. ಮೌಲ್ಯದ ಆಭರಣವನ್ನು ಬುರ್ಖಾ ಧಾರಿ ಮಹಿಳೆ ಎಗರಿಸಿರುವುದು ಕಂಡು ಬಂದಿತ್ತು.

ಉಪ್ಪಿನಂಗಡಿಯಲ್ಲೇ ಮಾರಾಟಕ್ಕೆ ಯತ್ನ !
ದಿನಾರ್‌ ಗೋಲ್ಡ್‌ ಆಂಡ್‌ ಡೈಮಂಡ್ಸ್‌ ಮಳಿಗೆಯಿಂದ ಕದ್ದ ಆಭರಣಗಳನ್ನು ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲೆ ಬಳಿಯ ಚಿನ್ನಾ ಭರಣ ಅಂಗಡಿಗೆ ತಂದು ಮಾರಾಟಕ್ಕೆ ಯತ್ನಿಸಿದಾಗ ಆರೋಪಿ ಮಹಿಳೆ ಸಿಕ್ಕಿ ಬಿದ್ದಳು. ಕಳವುಗೈದ ಚಿನ್ನಾಭರಣಗಳೆಲ್ಲ ಅದರಲ್ಲಿದ್ದವು. ಆಭರಣ ಅಂಗಡಿ ಮಾಲಕ ಸಂಶಯದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಚಾರಿಸಿ ದಾಗ ಕಳವು ಕೃತ್ಯವನ್ನು ಒಪ್ಪಿಕೊಂಡಳು. ಆರೋಪಿಯನ್ನು ಆಯಿಷತ್‌ ಶಮೀಲಾಬಿ ಎಂದು ಗುರುತಿಸಲಾಗಿದೆ.
ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!