





ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆಯ ನಾರ್ತ್ ಬ್ಯಾಂಕ್ ಗ್ರಾಮದ ಸಮೀಪ ವಿಶ್ವೇಶ್ವರಯ್ಯ ನಾಲೆಯ ಒಳಗೆ, ಕಾರಿನಲ್ಲಿ ಮೂರು ಮೃತದೇಹಗಳು ಮಂಗಳವಾರ ಪತ್ತೆಯಾಗಿವೆ.
ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕು ಹೆಬ್ಬಾಳು ಗ್ರಾಮದ ಕುಮಾರಸ್ವಾಮಿ (38), ಅವರ ಮಕ್ಕಳಾದ ಅದ್ವತ್ (8) ಮತ್ತು ಅಕ್ಷತಾ (3) ಎಂದು ಗುರುತಿಸಲಾಗಿದೆ.
ಕುಮಾರಸ್ವಾಮಿ ಏ. 16ರಂದು ಮಕ್ಕಳ ಜತೆ ತಮ್ಮ ಕಾರಿನಲ್ಲಿ ಬೆಂಗಳೂರಿನಿಂದ ಕೆ. ಆರ್. ನಗರಕ್ಕೆ ಹೊರಟಿದ್ದರು. ಬಳಿಕ ಅವರ ಸುಳಿವು ಸಿಕ್ಕಿರಲಿಲ್ಲ.
ಏ.19ರಂದು ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಕಾರು ಮತ್ತು ಮೃತದೇಹಗಳನ್ನು ನಾಲೆಯಿಂದ ಮೇಲೆ ಎತ್ತಲಾಗಿದೆ. ಕಾರು ನಾಲೆಗೆ ಉರುಳಲು ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದರು. ಕೆ.ಆರ್.ಎಸ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಕ್ಕರೆ ನಾಡಿನ ಜೀವನಾಡಿಯಾಗಿರುವ ನಾಲೆಗಳು ಜೀವಹಾನಿ ಮಾಡುವ ಅಪಾಯದ ತಾಣಗಳೂ ಆಗಿವೆ. ರಸ್ತೆ ಪಕ್ಕ ಹಾದು ಹೋಗಿರುವ ನಾಲೆ, ಕೆರೆ-ಕಟ್ಟೆಗಳು ಅಪಾಯವನ್ನು ಆಹ್ವಾನಿಸುತ್ತಿದ್ದು, ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ ನಡೆದ ಜಲ ದುರಂತಗಳಲ್ಲಿ ಬರೋಬ್ಬರಿ 208 ಮಂದಿ ನೀರುಪಾಲಾಗಿದ್ದಾರೆ.
ಮಂಡ್ಯ ತಾಲ್ಲೂಕು ಮಂಚಹಳ್ಳಿ- ತಿಬ್ಬನಹಳ್ಳಿ ಸಮೀಪ ಎರಡು ತಿಂಗಳ ಹಿಂದೆ (ಫೆಬ್ರವರಿಯಲ್ಲಿ) ಕಾರು ನಾಲೆಗೆ ಬಿದ್ದು ಮೂವರು ನೀರುಪಾಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು

