
ತಮ್ಮ ನೆಚ್ಚಿನ ನಟನನ್ನು ಕಂಡಾಗ ಅಭಿಮಾನಿಗಳು ಅವರನ್ನು ಮಾತನಾಡಿಸುವುದು ಅಥವಾ ಫೋಟೊ ತೆಗೆಸಿಕೊಳ್ಳಲು ಬಹುತೇಕರು ಇಷ್ಟಪಡುತ್ತಾರೆ. ಆದರೆ ಕೆಲವು ಅಭಿಮಾನಿಗಳು ತಮ್ಮ ಮೆಚ್ಚಿನ ಸ್ಟಾರ್ ನಟ ನಟಿಯರ ಮೇಲೆ ಮುಗಿಬಿದ್ದು ಮುಜುಗರಕ್ಕೆ ಒಳಗಾಗಿಸುವುದು ಇದೆ.
ಸೆಲೆಬ್ರಿಟಿಗಳ ರಕ್ಷಣೆಗೆಂದು ಇರುವ ಬಾಡಿ ಗಾರ್ಡ್ ಗಳಿಗೂ ಮತ್ತು ಅಭಿಮಾನಿಗಳಿಗೂ ಇದೆ ವಿಚಾರಕ್ಕೆ ಅನೇಕ ಕಡೆ ಜಗಳ ನಡೆದಿರುವುದು ಇದೆ. ಅಂತೆಯೇ ಕಾಲಿವುಡ್ ನಟ ದಳಪತಿ ವಿಜಯ್ (Actor Vijay) ಶೂಟಿಂಗ್ ನಿಂದ ವಾಪಾಸ್ಸಾಗುತ್ತಿದ್ದ ವೇಳೆ ಅಭಿಮಾನಿಯೊಬ್ಬ ಏಕಾಏಕಿಯಾಗಿ ಮನ ಬಂದಂತೆ ವರ್ತಿಸಿದ್ದಾನೆ. ಇದರಿಂದಾಗಿ ವಿಜಯ್ ಬಾಡಿಗಾರ್ಡ್ ಗನ್ ಹೊರತೆಗೆದು ಪರಿಸ್ಥಿತಿ ಹತೋಟಿಗೆ ತರಲು ಮುಂದಾ ಗಿದ್ದಾರೆ. ಯಾವುದೇ ಸೂಕ್ತ ಕಾರಣ ಇಲ್ಲದೆ ಅದರಲ್ಲಿಯೂ ಸಾರ್ವಜನಿಕ ಸ್ಥಳದಲ್ಲಿ ಗನ್ ತೆಗೆದಿದ್ದು ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧಿತ ವಿಡಿಯೊ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.
ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ ರಾಜಕೀಯ ಮತ್ತು ಸಿನಿಮಾ ವಿಚಾರವಾಗಿ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಯಲ್ಲಿರುತ್ತಾರೆ. ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷವನ್ನು ಕಟ್ಟಿ ಈ ಪಕ್ಷದ ಪ್ರಚಾರಕಾರ್ಯದಲ್ಲಿ ತುಂಬಾ ಬ್ಯುಸಿ ಯಾಗಿದ್ದಾರೆ. ಮುಂಬರುವ 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಕಲ ತಯಾರಿಗಳನ್ನು ಆರಂಭಿಸಿದ್ದಾರೆ. ಇದರ ಜೊತೆಗೆ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಜನ ನಾಯಗನ್ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಹೊಸ ನಿರೀಕ್ಷೆ ಹುಟ್ಟುಹಾಕಿದೆ. ಜನ ನಾಯಗನ್ ಸಿನಿಮಾದ ಚಿತ್ರೀಕರಣ ಬರದಿಂದ ಸಾಗುತ್ತಿದ್ದು ಇದೇ ಚಿತ್ರೀಕರಣಕ್ಕಾಗಿ ಶೂಟಿಂಗ್ ಮುಗಿಸಿ ಹಿಂತಿರುಗುವ ವೇಳೆಯಲ್ಲಿ ಅಭಿಮಾನಿಯನ್ನು ಹತೋಟಿಗೆ ತರಲು ಅವರ ಭದ್ರತಾ ಸಿಬಂದಿ ಗನ್ ಹೊರತೆಗೆದಿದ್ದು ನಟ ವಿಜಯ್ ಗೆ ಹೊಸ ಸಂಕಷ್ಟ ಎದುರಾಗುವಂತೆ ಮಾಡಿದೆ.
ಇಂಡಸ್ಟ್ರಿ ಟ್ರ್ಯಾಕರ್ ಮನೋಬಾಲಾ ವಿಜಯಬಾಲನ್ ಅವರು ಟ್ವಿಟರ್ ಎಕ್ಸ್ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ. ನಟ ವಿಜಯ್ ಶೂಟಿಂಗ್ ಮುಗಿಸಿ ಮಧುರೈ ವಿಮಾನ ನಿಲ್ದಾಣದ ಟರ್ಮಿನಲ್ಗೆ ಕಾರಿನಿಂದ ಕೆಳಗಿಳಿದು ಬರುತ್ತಿರುವಾಗ ಅಭಿಮಾನಿಯೊಬ್ಬರು ನಟನ ಕಡೆಗೆ ಓಡಿ ಬರುತ್ತಾರೆ. ಇದು ಯಾವುದಾದರೂ ದಾಳಿ ಇರಬಹುದಾ ಎಂಬ ಗೊಂದಲದಲ್ಲಿಯೇ ವಿಜಯ್ ಭದ್ರತಾ ಸಿಬಂದಿ ಒಬ್ಬರು ಬಂದೂಕನ್ನು ಹೊರತೆಗೆದು ಹೆದರಿಸಿದ್ದಾರೆ. ಬಳಿಕ ಭದ್ರತಾ ಸಿಬಂದಿ ತಂಡವು ಆ ವ್ಯಕ್ತಿಯನ್ನು ಕರೆದು ಕೊಂಡು ಹೋಗಿದ್ದು ಹೀಗೆ ಕೆಲ ಹೊತ್ತು ಗೊಂದಲ ಉಂಟಾಗಿದೆ. ಆದರೆ ನಟ ವಿಜಯ್ ವಿಚಲಿತರಾಗದೆ ತಮ್ಮ ಪಾಡಿಗೆ ವಿಮಾನ ನಿಲ್ದಾಣದ ಒಳ ಹೋಗಿದ್ದಾರೆ. ದೃಶವನ್ನು ವೈರಲ್ ವಿಡಿಯೊದಲ್ಲಿ ಕಾಣಬಹುದು.
ಈ ವಿಡಿಯೊಗೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಭದ್ರತಾ ಸಿಬಂದಿಗೆ ವಿಜಯ್ ಬುದ್ಧಿ ಹೇಳಬೇಕಿತ್ತು ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗೆ ಇದರಿಂದ ಯಾವುದೇ ಹಾನಿಯಾಗಿಲ್ಲ, ಬಳಿಕ ನಟ ವಿಜಯ್ ಅಭಿಮಾನಿಯನ್ನು ಸುರಕ್ಷಿತವಾಗಿ ಕರೆದೊಯ್ಯಲಾಯಿತು.
ಹಿರಿಯ ಹಾಸ್ಯನಟ ಗೌಂಡಮಣಿ ಅವರ ಪತ್ನಿ ಶಾಂತಿ ಅವರ ನಿಧನದ ಸಂದರ್ಭದಲ್ಲಿ ವಿಜಯ್, ತಕ್ಷಣ ತಮ್ಮ ಸ್ನೇಹಿತನ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದ ಫೋಟೊ ಸಹ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ತಮ್ಮ 69ನೇ ಸಿನಿಮಾ ಮಾಡಿದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳುವುದಾಗಿಯೂ ವಿಜಯ್ ಹೇಳಿದ್ದ ಸುದ್ದಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕೊನೆಯ ಸಿನಿಮಾವನ್ನು ಸೆಲೆಬ್ರೇಟ್ ಮಾಡಲು ಕಾತುರ ದಿಂದ ಕಾಯುತ್ತಿದ್ದಾರೆ.






