ಕೊಳತ್ತಮಜಲಿನ ಹತ್ಯೆಗೀಡಾದ ಅಬ್ದುಲ್ ರಹ್ಮಾನ್ ಮತ್ತು ಹಲ್ಲೆಗೊಳಗಾಗಿ ಚೇತರಿಸಿಕೊಳ್ಳುತ್ತಿರುವ ಖಲಂದರ್ ಶಾಫಿ ಮನೆಗೆ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಬುಧವಾರ ಭೇಟಿ ನೀಡಿದರು.

ಕೊಲೆಯಾದ ಅಬ್ದುಲ್ ರಹ್ಮಾನ್ ಅವರ ತಂದೆ ಮತ್ತು ತಾಯಿ ಮತ್ತು ಕುಟುಂಬಸ್ಥರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದರು.

ಖಲಂದರ್ ಶಾಫಿ ಅವರನ್ನೂ ಭೇಟಿಯಾಗಿ ಅವರ ಚೇತರಿಕೆಯ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್ ಅವರು ಅಬ್ದುಲ್ ರಹ್ಮಾನ್ ಕೊಲೆ ಮತ್ತು ಆತನ ಸ್ನೇಹಿತ ಕಲಂದರ್ ಶಾಫಿ ಮೇಲೆ ನಡೆದಿರುವ ಹಲ್ಲೆ ಘಟನೆಯು ಅತ್ಯಂತ ನೋವಿನ ವಿಚಾರವಾಗಿದೆ. ಇದು ದ.ಕ. ಜಿಲ್ಲೆಯ ಹಾಗೂ ಕರಾವಳಿಯ ವಿಶ್ವಾಸಭರಿತ ಮತ್ತು ಸೌಹಾರ್ದತೆಯ ಸಮಾಜಕ್ಕೆ ನೀಡಿದ ಪ್ರಬಲ ಕೊಡಲಿಯೇಟು ಆಗಿದೆ ಎಂದು ಹೇಳಿದರು.

ಈ ಘಟನೆಯ ನಡೆಯುವ ನಡೆದ ಹೊತ್ತಿಗೆ ನಾನು ಊರಲ್ಲಿ ಇರಲಿಲ್ಲ. ಪವಿತ್ರ ಹಜ್ ಯಾತ್ರೆಗೆ ಹೋಗಿದ್ದೆ. ಈ ಕಾರಣದಿಂದಾಗಿ ಅಬ್ದುಲ್ ರಹಿಮಾನ್ ಮನೆಗೆ ಭೇಟಿ ನೀಡಲು ಈ ಮೊದಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.

‘ಒಬ್ಬನನ್ನು ವಿಶ್ವಾಸದಿಂದ ಕರೆದುಕೊಂಡು ಹೋಗಿ ಆತನಿಂದ ಕೆಲಸ ಮಾಡಿಸಿದ ಬಳಿಕ ಆತನಿಗೆ ಸೂಕ್ತ ವೇತನ ನೀಡಬೇಕಾಗಿರುವುದು ಕೆಲಸ ಮಾಡಿಸಿದರ ಧರ್ಮ. ಆದರೆ ಅಬ್ದುಲ್ ರಹ್ಮಾನ್ ನಿಂದ ಮನೆಗೆ ಹೊಯ್ಗೆ ಹಾಕಿಸಿಕೊಂಡವರು ಆತನಿಗೆ ವೇತನ ಕೊಡದೆ ಅವನ ಪ್ರಾಣ ತೆಗೆದಿರುವುದು ಹೇಡಿತನದ ಕೃತ್ಯ. ಇಂತಹ ಹೇಯ ಕೃತ್ಯವನ್ನು ಯಾವುದೇ ಧರ್ಮ , ನಾಗರಿಕ ಸಮಾಜ ಒಪ್ಪದು. ಇಂತಹ ವಿಶ್ವಾಸಘಾತಕ ಕೃತ್ಯವನ್ನು ಎಲ್ಲ ಸಮುದಾಯವರು ಖಂಡಿಸಿದ್ದಾರೆ ಎಂದರು.

ಸೌಹಾರ್ದತೆಯಿಂದ ಕೂಡಿದ್ದ ಕೊಳತ್ತಮಜಲುವಿನಲ್ಲಿ ಅಬ್ದುಲ್ ರಹ್ಮಾನ್ ಹತ್ಯೆಯಿಂದಾಗಿ ಅಲ್ಲಿನ ಸೌಹಾರ್ದತೆಗೆ ಧಕ್ಕೆ ಆಗಿದೆ. ಎಲ್ಲ ಈ ಊರಲ್ಲಿ ಮತ್ತೆ ಶಾಂತಿ, ಸೌಹಾರ್ದತೆಯ ವಾತಾವರಣವನ್ನು ಮರಳಿ ಮೂಡಿಸಲು ಶ್ರಮಿಸಲಾಗುವುದು ಎಂದರು.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ನೀಡಲಾಗಿದೆ. ಅಬ್ದುಲ್ ರಹಿಮಾನ್ ಕೊಲೆ ಪ್ರಕರಣವನ್ನು ಎನ್‌ಐಎಗೆ ನೀಡಬೇಕೆಂಬ ಬೇಡಿಕೆ ಇದೆ ಎಂಬ ಬಗ್ಗೆ ಸುದ್ದಿಗಾರರು ಸ್ಪೀಕರ್ ಅವರ ಗಮನ ಸೆಳೆದಾಗ ‘ಅಬ್ದುಲ್‌ ರಹ್ಮಾನ್ ರ ಮನೆಯವರ ಬೇಡಿಕೆ ಏನು ? ಎಂಬ ಬಗ್ಗೆ ತಿಳಿದುಕೊಂಡು ಗೃಹ ಸಚಿವರು ಮತ್ತು ಸಂಬಂಧಪಟ್ಟ ಇಲಾಖೆಯೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು. ಅಬ್ದುಲ್ ರಹ್ಮಾನ್ ಮನೆಯವರ ನೋವನ್ನು ಶಮನಗೊಳಿಸಲು ಶ್ರಮಿಸಲಾಗುವುದು. ಊರಿನ ಎಲ್ಲರಲ್ಲೂ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ತನಿಖೆ ನಡೆದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದರು.



ನಾನು ಹಜ್ ಯಾತ್ರೆಗೆ ಹೋಗುವ ಮೊದಲೇ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ವರಿಷ್ಠಾಧಿಕಾರಿಯ ಬದಲಾವಣೆಯ ನಿರ್ಧಾರ ಆಗಿತ್ತು. ಆದರೆ ಆದೇಶ ಸ್ವಲ್ಪ ತಡವಾಯಿತು. ಈ ನಡುವೆ ಕೊಲೆ ಪ್ರಕರಣ ನಡೆದಿದೆ. ಸಾಮಾಜಿಕ ಜಾಲಾತಾಣದಲ್ಲಿ ಚಾಲೆಂಜ್ ಮತ್ತು ಕೋಮುದ್ವೇಷಪೂರಿತ ಹೇಳಿಕೆ ನೀಡುವರ ವಿರುದ್ಧ ಸೂಕ್ತ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮೊದಲೇ ಸ್ಪಷ್ಟ ಆದೇಶ ಆಗಿತ್ತು. ಆದರೆ ಅವರಿಂದ ಯಾಕೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಯವರನ್ನು ಕರೆದು ಚರ್ಚಿಸಲಾಗುವುದು. ಮಂಗಳೂರಿಗೆ ಆಕ್ಟಿವ್ ಮಾತ್ರವಲ್ಲ ಪ್ರೊ ಆಕ್ಟಿವ್ ಅಧಿಕಾರಿಗಳು ಬೇಕಾಗಿದೆ ಎಂದು ಹೇಳಿದರು.

ಎಸ್‌ಐಟಿ ತನಿಖೆ ಆಗ್ರಹ: ಅಬ್ದುಲ್ ರಹಿಮಾನ್ ಕೊಲೆ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಬೇಕು ಮತ್ತು ಕೊಲೆಯ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಬೇಕು ಎಂದು ಅಬ್ದುಲ್ ರಹ್ಮಾನ್ ಕುಟುಂಬಸ್ಥರು ಸ್ಪೀಕರ್ ಖಾದರ್ ಅವರಲ್ಲಿ ಮನವಿ ಮಾಡಿದರು.

ಸರಕಾರ ನ್ಯಾಯ ಒದಗಿಸಲಿದೆ ಎಂದು ಖಾದರ್ ಭರವಸೆ ನೀಡಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!