
274 ಮಂದಿ ಪ್ರಾಣ ಕಸಿದ ಅಹಮದಾಬಾದ್ ವಿಮಾನ ದುರಂತ ಸಂಭವಿಸಿದ ಕೆಲವೇ ದಿನಗಳಲ್ಲಿ ಪಾರ್ಟಿ ಮಾಡಿದ್ದಲ್ಲದೇ, ಕಚೇರಿಯಲ್ಲೇ ಮೋಜು-ಮಸ್ತಿ ಮಾಡಿದ ನಾಲ್ವರು ಅಧಿಕಾರಿಗಳನ್ನು ಇದೀಗ ಏರ್ ಇಂಡಿಯಾ ವೆಂಚರ್ ಕೆಲಸದಿಂದ ಕಿತ್ತುಬಿಸಾಡಿದೆ. ಉಳಿದ ಸಿಬ್ಬಂದಿಗಳಿಗೆ ಎಚ್ಚರಿಕೆ ಕೊಟ್ಟಿದೆ.
ಏರ್ ಇಂಡಿಯಾದ ಏರ್ಪೋರ್ಟ್ ಗೇಟ್ವೇ ಸೇವೆಗಳನ್ನು ಒದಗಿಸುವ AISATSನ ನಾಲ್ವರು ಹಿರಿಯ ಉದ್ಯೋಗಿಗಳಿಗೆ ಕೂಡಲೇ ರಾಜೀನಾಮೆ ನೀಡುವಂತೆ ಸಂಸ್ಥೆ ಸೂಚಿಸಿದೆ. ಉದ್ಯೋಗಿಗಳು ಮತ್ತು ಸಿಬ್ಬಂದಿಗಳು ಕೆಲಸದ ಸ್ಥಳದಲ್ಲಿ ಪಾರ್ಟಿ, ಮೋಜು-ಮಸ್ತಿ ಮಾಡುತ್ತಿರುವ ದೃಶ್ಯ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಸಂಸ್ಥೆ ಶಿಸ್ತಿನ ಕ್ರಮ ಜರುಗಿಸಿದೆ.
‘ದುರಂತ ಸಂಭವಿಸಿದ ಕೆಲವೇ ಕೆಲವು ದಿನಗಳ ಬಳಿಕ ಗುರುಗ್ರಾಮ್ ಕಚೇರಿಯಲ್ಲೇ ಪಾರ್ಟಿ ಮಾಡಿ ಸಂಭ್ರಮಿಸಿದ್ದ ಉದ್ಯೋಗಿಗಳ ನಡೆ ತೀರ ಬೇಸರ ತಂದಿದೆ. ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳೊಂದಿಗೆ ನಾವು ಇಂದಿಗೂ ನಿಲ್ಲುತ್ತೇವೆ. ಈ ವಿಡಿಯೋದಿಂದ ಹಲವರ ಭಾವನೆಗೆ ಧಕ್ಕೆ ಉಂಟಾಗಿದೆ. ಇದಕ್ಕೆ ವಿಷಾದಿಸುತ್ತೇವೆ’ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ






