ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಬಳಿ ಏಳು ವರ್ಷಗಳ ಹಿಂದೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರಾಜ್ಯ ಕಳ್ಳನೊಬ್ಬನನ್ನು ಅರಸೀಕೆರೆ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಾಖಂಡದ ನೈನಿತಾಲ್ ಮೂಲದ ಜಿತೇಂದ್ರ ಕುಮಾರ್ ಎಂಬಾತನೇ ಈ ಆರೋಪಿ.

ಪ್ರಕರಣದ ವಿವರ:

2018ರಲ್ಲಿ ಸ್ವಾಮೀಜಿ ಬಾಗಲಕೋಟೆಯಿಂದ ಅರಸೀಕೆರೆಗೆ ರೈಲಿನ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಲೆದರ್ ಬ್ಯಾಗ್‌ನಲ್ಲಿ 250 ಗ್ರಾಂ ಚಿನ್ನದ ಸರ, ಗೌರಿಶಂಕರ ರುದ್ರಾಕ್ಷಿ ಪದಕ, 50 ಗ್ರಾಂನ ಎರಡು ಚಿನ್ನದ ಉಂಗುರಗಳು ಹಾಗೂ 1.62 ಲಕ್ಷ ರೂ. ನಗದು ಹಣವನ್ನು ಇಟ್ಟಿದ್ದರು. ತಲೆಯ ಕೆಳಗೆ ಬ್ಯಾಗ್ ಇಟ್ಟು ನಿದ್ದೆಗೆ ಜಾರಿದ್ದ ಸ್ವಾಮೀಜಿ, ತಡರಾತ್ರಿ 2:15ಕ್ಕೆ ಎದ್ದು ನೋಡಿದಾಗ ಬ್ಯಾಗ್ ಸ್ಥಾನ ಬದಲಾಗಿ, ಅದರಲ್ಲಿದ್ದ ಚಿನ್ನಾಭರಣ ಮತ್ತು ಹಣ ಕಾಣೆಯಾಗಿತ್ತು. ಈ ಬಗ್ಗೆ ಅರಸೀಕೆರೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಆರೋಪಿಯ ಕೃತ್ಯ ಬಯಲು:

ಜಿತೇಂದ್ರ ಕುಮಾರ್ ರೈಲಿನ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರಂತೆ ಟಿಕೆಟ್ ಖರೀದಿಸಿ, ಚಿನ್ನಾಭರಣ ಮತ್ತು ಹಣ ಇರುವವರನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ. ಇವನು ವಾಹನ ಡೀಲರ್ ಕೆಲಸದ ಜೊತೆಗೆ ಹಣದ ಅಗತ್ಯಕ್ಕೆ ತಕ್ಕಂತೆ ರೈಲುಗಳಲ್ಲಿ ಕಳ್ಳತನಕ್ಕಿಳಿಯುತ್ತಿದ್ದ. ಚಿನ್ನಾಭರಣ, ಹಣ ಇರುವರನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿ. ಇತ್ತೀಚೆಗೆ ಉಡುಪಿಯಿಂದ ಬೆಂಗಳೂರಿಗೆ ಬರ್ತಿದ್ದ ವೃದ್ದರ ಬಳಿ 65 ಸಾವಿರ ರೂ. ಮೌಲ್ಯದ ಚಿನ್ನಾಭರಣ, ಹಣ ಕಳ್ಳತನ ಮಾಡಿದ್ದ. ಈ ಕೇಸ್ ತನಿಖೆ ನಡೆಸುತ್ತಿದ್ದ ಅರಸಿಕೇರೆ ಪೊಲೀಸರಿಂದ ಜಿತೇಂದ್ರ ಬಂಧನವಾಗಿದೆ.

ತನಿಖೆಯ ಫಲಿತಾಂಶ:

ಏಳು ವರ್ಷಗಳ ನಿರಂತರ ತನಿಖೆಯ ನಂತರ ಜಿತೇಂದ್ರ ಕುಮಾರ್‌ನನ್ನು ಬಂಧಿಸಲಾಗಿದ್ದು, ಒಟ್ಟು 22.75 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಂಧನದಿಂದ ಕರ್ನಾಟಕ, ತಮಿಳುನಾಡು, ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಡೆದ 13 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಅರಸೀಕೆರೆ ರೈಲ್ವೆ ಪೊಲೀಸರ ತನಿಖೆಯ ಯಶಸ್ಸಿನಿಂದ ಈ ಅಂತರಾಜ್ಯ ಕಳ್ಳನ ಜಾಲ ಬಯಲಾಗಿದ್ದು ವಿಚಾರಣೆ ಬಳಿಕ ಇನ್ನಷ್ಟು ಪ್ರಕರಣಗಳು ಬಯಲಿಗೆ ಬರುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!