
ಪುತ್ತೂರು: “ನಿಮ್ಮ ಬ್ಯಾಂಕ್ ಖಾತೆ ತಡೆಹಿಡಿದಿದೆ, ಸರಿಪಡಿಸಲು ಒಟಿಪಿ ತಿಳಿಸಿ” ಎಂಬ ನಾಟಕವಾಡಿ 73 ವರ್ಷದ ಹಿರಿಯ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು ಮೋಸ ಮಾಡಿರುವ ಘಟನೆ ಪುತ್ತೂರಿನಲ್ಲಿ ವರದಿಯಾಗಿದೆ.
ಚಿಕ್ಕಮುನ್ನೂರು ಗ್ರಾಮದ ಊರಮಾಲು ನಿವಾಸಿ ವೃದ್ಧ ಮಹಿಳೆಯೊಬ್ಬರು ಜುಲೈ 22ರಂದು ಪುತ್ತೂರು ಕೆನರಾ ಬ್ಯಾಂಕ್ಗೆ ಹೋಗಿ ತಮ್ಮ ಖಾತೆಯಿಂದ ₹15,000 ನಗದೀಕರಿಸಿ ಮನೆಗೆ ಬಂದಿದ್ದರು. ನಂತರ ಅವರ ಮೊಬೈಲ್ಗೆ “ನಾವು ಕೆನರಾ ಬ್ಯಾಂಕ್ನಿಂದ ಮಾತನಾಡುತ್ತಿದ್ದೇವೆ, ನಿಮ್ಮ ಖಾತೆ ತಡೆಹಿಡಿಯಲಾಗಿದೆ, ಅದನ್ನು ಸರಿಪಡಿಸಲು ಒಟಿಪಿ ತಿಳಿಸಿ” ಎಂಬ ಕರೆ ಬಂದಿತು.
ಅವರು ನಂಬಿದ ಮಹಿಳೆ ಒಟ್ಟು 7 ಬಾರಿ ಒಟಿಪಿ ನೀಡಿದ ಪರಿಣಾಮ, ಅವರ ಖಾತೆಯಿಂದ ₹1,36,257 ಅನ್ನು ವಂಚಕರು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.
ಘಟನೆ ಕುರಿತು ಮಹಿಳೆಯ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.






