
ಮಂಗಳೂರು: ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ತೋರಿಸಿದ ಶವ ಹೂತುಹಾಕಿರುವ ಸ್ಥಳಗಳ ಶೋಧ ಕಾರ್ಯ ಇದೀಗ ಹೊಸ ಹಂತ ಪ್ರವೇಶಿಸಿದೆ. ಗುರುತಿಸಿದ 13ನೇ ಸ್ಥಳದಲ್ಲಿ ಅಗೆತ ಮೊದಲು ಭೂಗತ ರಾಡಾರ್ (ಜಿಪಿಆರ್) ತಂತ್ರಜ್ಞಾನ ಬಳಕೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ತೀರ್ಮಾನಿಸಿದೆ.
ಕಳೆದ ಎರಡು ವಾರಗಳಲ್ಲಿ ಶವ ಹೂತುಹಾಕಿರುವುದಾಗಿ ಹೇಳಿದ ಆ ವ್ಯಕ್ತಿ ಒಟ್ಟು 19 ಸ್ಥಳಗಳನ್ನು ತೋರಿಸಿದ್ದರೂ, ಈವರೆಗೆ ಕೇವಲ ಎರಡು ಸ್ಥಳಗಳಲ್ಲಿ ಮಾತ್ರ ಅಸ್ಥಿಪಂಜರ ಪತ್ತೆಯಾಗಿದೆ. ಉಳಿದಡೆ ಯಾವುದೇ ಕುರುಹು ಸಿಗದ ಕಾರಣ ತನಿಖೆಯ ದಿಕ್ಕು ಬದಲಾಗಿದೆ. ಸಮಯ ಮತ್ತು ಶ್ರಮ ಉಳಿಸಲು 13ನೇ ಸ್ಥಳದಲ್ಲಿ ಜಿಪಿಆರ್ ಮೂಲಕ ಭೂಗತ ಪರಿಶೀಲನೆ ನಡೆಸಿ, ನಂತರವೇ ಅಗೆತ ಮಾಡಲು ತಂಡ ನಿರ್ಧರಿಸಿದೆ.
ವೈಜ್ಞಾನಿಕ ವಿಧಾನಗಳನ್ನು ಬಳಸಿ ಶೋಧ ಕಾರ್ಯಾಚರಣೆ ನಡೆಸಬೇಕೆಂಬ ಒತ್ತಾಯ ಹಿನ್ನಲೆಯಲ್ಲಿ, ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಪರ ವಕೀಲರು ಜಿಪಿಆರ್ ಬಳಕೆಗೆ ಮನವಿ ಸಲ್ಲಿಸಿದ್ದರು. ಕೆಲವರು ಖಾಸಗಿ ಕಂಪನಿಗಳ ಮೇಲೆ ಒತ್ತಡ ಹೇರಿದ ಪರಿಣಾಮ, ಜಿಪಿಆರ್ ಯಂತ್ರದ ಲಭ್ಯತೆ ಅಡಚಣೆಗೊಳಗಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳಗಳಲ್ಲಿ ಅಸ್ಥಿಪಂಜರ ಸಿಗದಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದು, ಹೋರಾಟಗಾರರು ವೈಜ್ಞಾನಿಕ ತಂತ್ರಜ್ಞಾನ ಬಳಕೆಯನ್ನು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಜಿಪಿಆರ್ ತಂತ್ರಜ್ಞಾನ ಮೊರೆ ಹೋಗಿದೆ.






