
ಪುತ್ತೂರು ತಾಲೂಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಗ್ರಾಮಾಂತರ ಭಾಗಗಳಿಗೆ ಸರಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ, ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಸ್ತುತ ಅನೇಕ ಗ್ರಾಮಗಳಿಗೆ ಕೆಎಸ್ಆರ್ಟಿಸಿಯ ಯಾವುದೇ ಬಸ್ ಸೌಲಭ್ಯವಿಲ್ಲದ ಕಾರಣದಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ನಾಗರಿಕರು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಸಾಧಿಸಲು, ಜೊತೆಗೆ ದೇರ್ಲಕಟ್ಟಿ, ಬಂಟ್ವಾಳ ಮತ್ತು ಮಂಗಳೂರಿನ ಆಸ್ಪತ್ರೆಗಳು ಹಾಗೂ ವೈದ್ಯಕೀಯ/ಇಂಜಿನಿಯರಿಂಗ್ ಕಾಲೇಜುಗಳಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಬೇಡಿಕೆ ಮಾಡಿದ ಪ್ರಮುಖ ಮಾರ್ಗಗಳು:
ಕರೋಪಾಡಿ ಗ್ರಾಮದ ಮಿತ್ತನಡ್ಕದಿಂದ ಕನ್ಯಾನ–ಕುಳಾಲು–ಸಾಲೆತ್ತೂರು–ಮಂಚಿ–ಬಿ.ಸಿ.ರೋಡ್ ಮಾರ್ಗ
ಕರೋಪಾಡಿ ಗ್ರಾಮದ ಬಿಸಿರೋಡು ಮಾರ್ಗ ಮಿತ್ತನಡ್ಕದಿಂದ ಕನ್ಯಾನ–ಕುಡ್ತಮುಗೇರು–ಸೇರ್ಕಳ–ಬೋಳಂತೂರು–ಕಲ್ಲಡ್ಕ–ವಿಟ್ಲ–ಸಾಲೆತ್ತೂರು–ಮಂಚಿ–ಇರಾ–ಮುಡಿಪು–ಮಂಗಳೂರು ಮಾರ್ಗ
ಈ ಮಾರ್ಗಗಳಿಗೆ ಕೆಎಸ್ಆರ್ಟಿಸಿಯ ಬಸ್ಸುಗಳ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆಯ ಮೂಲಕ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಕೊಳ್ನಾಡು ಗ್ರಾಪಂ ಉಪಾಧ್ಯಕ್ಷೆ ಅಸ್ಮಾ, ಸದಸ್ಯ ಸುಬಾಶ್ಚಂದ್ರ, ಅಳಿಕೆ ಗ್ರಾಪಂ ಅಧ್ಯಕ್ಷ ಪದ್ಮನಾಭ ಪೂಜಾರಿ ಹಾಗೂ ಪುತ್ತೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಉಪಸ್ಥಿತರಿದ್ದರು.






